ಬೆಂಗಳೂರು ಅ27 ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪ ಸೇರಿದಂತೆ ಎಂಟು ಮಂದಿ ಸಾಧಕರಿಗೆ ರಾಜ್ಯ ಮಟ್ಟದ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪುಣ್ಯಾನಂದಪುರಿ ಸ್ವಾಮೀಜಿಯವರ ತಾಯಿ ಮಹಾದೇವಮ್ಮ, ಬೆಳಗಾವಿ ಜಿಲ್ಲೆಯ ರಾಮಣ್ಣ ಮಹಾದೇವ ಗಸ್ತಿ, ಹಾಸನ ಜಿಲ್ಲೆಯ ಜಿ.ಒ. ಮಹಾಂತಪ್ಪ, ಮೈಸೂರು ಜಿಲ್ಲೆಯ ಸೋಮಣ್ಣ, ರಾಯಚೂರು ಜಿಲ್ಲೆಯ ಸ್ತ್ರೀ ರೋಗ ತಜ್ಞೆ ಶಾರದಾ ಪ್ರಭು ಹುಲಿನಾಯಕ, ಕವಯತ್ರಿ ಸುಕನ್ಯಾ ಮಾರುತಿ ಮತ್ತು ಬಳ್ಳಾರಿ ಜಿಲ್ಲೆಯ ಬಯಲಾಟ ಕಲಾವಿದೆ ಸುಜಾತಮ್ಮ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದರು.
ಪ್ರಶಸ್ತಿಯು ₹5 ಲಕ್ಷ ನಗದು ಮತ್ತು 20 ಗ್ರಾಂ. ಚಿನ್ನದ ಪದಕವನ್ನು ಒಳಗೊಂಡಿದೆ. 125ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ನಿವೃತ್ತ ಐಎಎಸ್ ಅಧಿಕಾರಿ ಬಿ. ಶಿವಪ್ಪ ನೇತೃತ್ವದ ಸಮಿತಿಯು ಎಲ್ಲವನ್ನೂ ಪರಿಶೀಲಿಸಿ ಪುರಸ್ಕೃತರನ್ನು ಆಯ್ಕೆ ಮಾಡಿದೆ ಎಂದರು.
0 Comments