ಹಿರಿಯೂರು:
ಹಿರಿಯೂರು ತಾಲೂಕಿನ ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶ ಶೇಕಡ 75.04 ರಷ್ಟು ಬಂದಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ನಮ್ಮ ತಾಲ್ಲೂಕು 2ನೇ ಸ್ಥಾನಗಳಿಸಿರುವುದು ನಮಗೆ ಅತ್ಯಂತ ಸಂತಸವನ್ನು ಉಂಟುಮಾಡಿದೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಈ 2023-24 ನೇ ಸಾಲಿನಲ್ಲಿ ಹಿರಿಯೂರು ತಾಲೂಕಿನಲ್ಲಿ ಫಲಿತಾಂಶ ಉತ್ತಮಪಡಿಸಲು ವ್ಯವಸ್ಥಿತವಾದ ಕ್ರಿಯೆಯನ್ನು ಅನುಸರಿಸಲಾಗಿತ್ತು. ಅದರಲ್ಲಿ ಎರಡು ಮೂರು ಶಾಲೆಗಳು ಒಂದೆಡೆ ಸೇರಿ ಹಮ್ಮಿಕೊಳ್ಳಲಾಗುತ್ತಿದ್ದ ಅಂತರ ಶಾಲಾ ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿಯಾಗಿ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಉತ್ತಮಗೊಳಿಸಿದವು.
ಇವಲ್ಲದೆ ಪ್ರತಿ ಶಾಲೆಗಳಲ್ಲೂ ಪೋಷಕರ ಸಭೆಗಳನ್ನು ಹಮ್ಮಿಕೊಂಡು ಪ್ರತಿ ವಿದ್ಯಾರ್ಥಿಯ ಪ್ರಗತಿಯನ್ನು ಪೋಷಕರೊಂದಿಗೆ ಚರ್ಚಿಸಿದ್ದು ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ -ಸೂಚನೆಗಳನ್ನು ಕೂಡ ಉತ್ತಮ ಪರಿಣಾಮ ಬೀರಿತು.ಅಲ್ಲದೆ ಫ್ರೌಢಶಾಲಾ ಶಿಕ್ಷಕರು ನಿಗದಿತವಾಗಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಅವರ ಕಲಿಕೆಯನ್ನು ಪರಿಶೀಲಿಸುತ್ತಿದ್ದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ದತ್ತು ಪಡೆದು ಅವರ ಕಲಿಕೆಯನ್ನು ಉತ್ತಮ ಪಡಿಸಲು ವೈಯಕ್ತಿಕ ಗಮನವನ್ನು ಶಿಕ್ಷಕರು ನೀಡಿದ್ದರಿಂದ ಉತ್ತಮ ಫಲಿತಾಂಶ ಸಾಧ್ಯವಾಯಿತು. ಇದಲ್ಲದೆ ಪ್ರತಿ ತಿಂಗಳು ತಾಲ್ಲೂಕು ಮಟ್ಟದಲ್ಲಿ ಮುಖ್ಯ ಶಿಕ್ಷಕರ ಸಭೆಗಳನ್ನು ನಡೆಸಿದ್ದು, ಪ್ರತಿ ಶಾಲೆಯ ಕಲಿಕಾ ಪ್ರಗತಿಯನ್ನು ಪರಾಮರ್ಶಿಸಿ ಸಲಹೆಗಳನ್ನು ಮತ್ತು ಗುರಿಗಳನ್ನು ನೀಡಲಾಗುತ್ತಿತ್ತು.
ಈ ಎಲ್ಲಾ ಕಾರಣದಿಂದಾಗಿ ತಾಲೂಕಿನ ಫಲಿತಾಂಶ ಉತ್ತಮವಾಯಿತು ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಅವರು ತಿಳಿಸಿದರಲ್ಲದೆ, ತಾಲ್ಲೂಕಿನಲ್ಲಿ ಶಾಲೆಗಳು ಶೇಕಡಾ 100 ಫಲಿತಾoಶ ಪಡೆದಿದ್ದು, ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಎಲ್ಲಾ ಶಾಲೆಗಳ ಶಿಕ್ಷಕ-ಶಿಕ್ಷಕಿಯರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.
ಇದೇ ಸಂದರ್ಭದಲ್ಲಿ ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳನ್ನು ಗಳಿಸಿ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ರಾಷ್ಟ್ರೀಯ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ತನುಶ್ರೀ ಮತ್ತು ಕುಮಾರಿ ಹಿರಣ್ಮಯಿ ಇವರುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಾಲು ಹೊದಿಸಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ತಿಪ್ಪೇರುದ್ರಪ್ಪ, ಶಿಕ್ಷಣ ಸಂಯೋಜಕರುಗಳಾದ ಶಶಿಧರ್, ಲೋಹಿತ್, ಹರೀಶ್, ಗಿರೀಶ್, ಪ್ರಸನ್ನಕುಮಾರ್,ಅಕಾಡೆಮಿಪರಮೇಶ್, ಸೇರಿದಂತೆ ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ಪೋಷಕರುಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments