ಹಿರಿಯೂರಿನಲ್ಲಿ ಎಲ್ಲೆಲ್ಲೂ ರಾಶಿ ರಾಶಿ ಬೂದು ಕುಂಬಳಕಾಯಿ…! ದಸರಾ ಹಬ್ಬಕ್ಕೆ ಗಗನಕ್ಕೆ ಏರಿದ ಹಣ್ಣು, ತರಕಾರಿ ಹೂವಿನ ಬೆಲೆ

by | 21/10/23 | ಸುದ್ದಿ


ಹಿರಿಯೂರು :
ನಗರದಲ್ಲಿ ಆಯುಧಪೂಜೆ ಹಬ್ಬಕ್ಕಾಗಿ ಈಗಾಗಲೇ ಲೋಡುಗಟ್ಟಲೆ ಬೂದು ಕುಂಬಳಕಾಯಿ ಬಂದಿದ್ದು, ಎಲ್ಲೆಲ್ಲೂ ಕುಂಬಳಕಾಯಿಯದೇ ದರ್ಬಾರ್. ನಗರದ ನೆಹರೂ ಮಾರುಕಟ್ಟೆ ಆವರಣ, ಗಾಂಧಿಸರ್ಕಲ್, ಖಾಸಗಿಬಸ್ ಸ್ಟ್ಯಾಂಡ್, ನೆಹರೂ ಸರ್ಕಲ್, ಹುಳಿಯಾರು ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್, ಗುರುಭವನದ ಮುಂಭಾಗ ಸೇರಿದಂತೆ ಎಲ್ಲೆಲ್ಲೂ ಪುಟ್ ಪಾತ್ ತುಂಬೆಲ್ಲಾ ವ್ಯಾಪಾರಕ್ಕಾಗಿ ರಾಶಿ ರಾಶಿ ಬೂದು ಕುಂಬಳಕಾಯಿಯನ್ನು ತಂದು ಸುರಿಯಲಾಗಿದೆ.
ಗೌರಿ-ಗಣೇಶ ಹಬ್ಬ ಮುಗಿದ ನಂತರ ಪಾತಾಳಕ್ಕೆ ಕುಸಿದಿದ್ದ ಹೂವಿನ ಬೆಲೆ ಈಗ ಚೇತರಿಸಿಕೊಂಡು ಹೂವಿನ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದೆ. ದಸರಾ ಹಬ್ಬ ಇನ್ನು ಒಂದು ದಿನ ಇರುವಾಗಲೇ ನಗರದಲ್ಲಿ ಹೂವು, ಹಣ್ಣು, ತರಕಾರಿಗಳು ಬಾಳೆಕಂಬ, ಪೂಜಾಸಾಮಾಗ್ರಿಗಳ, ಬೆಲೆ ಸಾರ್ವಜನಿಕರಿಗೆ ದುಬಾರಿಯಾಗಿ ಏರಿಕೆಯಾಗಿದ್ದರೂ ನಗರದ ನಾಗರೀಕರಲ್ಲಿ ಈ ಎಲ್ಲಾ ವಸ್ತುಗಳನ್ನು ಕೊಂಡುವಲ್ಲಿ ಹಬ್ಬದ ಸಡಗರಸಂಭ್ರಮ ಕಡಿಮೆಯಾಗಿಲ್ಲ.
ಈ ಆಯುಧ ಪೂಜೆ ಹಬ್ಬದಲ್ಲಿ ಜನರು ತಮ್ಮ ವಾಹನಗಳು ಆಯುಧಗಳು, ನಿತ್ಯಬಳಕೆಯ ಉಪಕರಣಗಳು ಸೇರಿದಂತೆ ಅಂಗಡಿಮುಂಗಟ್ಟುಗಳನ್ನು ತಳಿರು ತೋರಣಗಳಿಂದ ಹಾಗೂ ಬಾಳೆಕಂದುಗಳಿಂದ ಅಲಂಕರಿಸಿ, ಲಕ್ಷ್ಮೀ, ಸರಸ್ವತಿ, ಗಣಪತಿಗೆ ಪೂಜೆ ಸಲ್ಲಿಸಿದ ನಂತರ ಕುಂಬಳಕಾಯಿಗೆ ಕುಂಕುಮ ತುಂಬಿ ಅಂಗಡಿಗಳ ಮುಂದೆ ಹಾಗೂ ವಾಹನಗಳ ಮುಂದೆ ಒಡೆಯುವುದು ಒಂದು ಸಂಪ್ರದಾಯವಾಗಿದ್ದು, ಈ ದಸರಾ ಹಬ್ಬದಲ್ಲಿ ಬೂದುಕುಂಬಳಕಾಯಿ ಬಹಳ ಬೇಡಿಕೆಯ ವಸ್ತುವಾಗಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *