ಹೊಸದುರ್ಗ ಡಿ.27 ನಿಧಿ ಆಸೆಗೆ ಕೋಟೆ, ಕೊತ್ತಲು, ಪುರಾತನ ದೇವಸ್ಥಾನ ಶೋಧ ಕಾರ್ಯದಂತಹ ದುಷ್ಕೃತ್ಯ ನಡೆಸುತ್ತಿರುವ ಘಟನೆ ಇತ್ತೀಚಿಗೆ ಹೆಚ್ಚಾಗಿವೆ. ಕಳ್ಳರು ಮಾಡುವ ಇಂತಹ ಕೃತ್ಯಕ್ಕೆ ದೇವಸ್ಥಾನಗಳು, ವಿಗ್ರಹಗಳು ಹಾಳಾಗುವ ಮೂಲಕ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಇಂತಹದ್ದೊಂದು ಕೃತ್ಯ ಹೊಸದುರ್ಗ ತಾಲ್ಲೂಕಿನ ನಡೆದಿದೆ.
ಹೊಸದುರ್ಗ ಸಮೀಪದ ಕಾರೇಹಳ್ಳಿಯಲ್ಲಿನ ಇತಿಹಾಸ ಪ್ರಸಿದ್ಧ ಹೊಯ್ಸಳರ ಕಾಲದ ಹರಿಹರೇಶ್ವರ ದೇವಾಲಯದ ಬಾಗಿಲಿಗೆ ಕಳ್ಳರು ಬೆಂಕಿ ಹಚ್ಚಿದ್ದಾರೆ ದುಷ್ಕೃತ್ಯ ಮೆರೆದಿದ್ದಾರೆ.
ವೇದಾವತಿ ನದಿ ತಟದಲ್ಲಿರುವ ಹೊಯ್ಸಳರ ಕಾಲದ ಈ ದೇವಾಲಯ ಗ್ರಾಮದ ಹೊರವಲಯದಲ್ಲಿದೆ. ಇದನ್ನು ಬೇಚಾರ ಅಥವಾ ಹಾಳೂರು ಎನ್ನಲಾಗುತ್ತದೆ. ಇಲ್ಲಿ ಎಲ್ಲೇ ಅಗೆದರೂ ಗ್ರಾಮದ ಅವಶೇಷಗಳು ಪತ್ತೆಯಾಗಿವೆ. ಹಾಗಾಗಿ ಇಲ್ಲಿ ಹಿಂದೆ ಊರಿದ್ದಿರಬಹುದು ಎಂದು ಊಹಿಸಲಾಗಿದೆ.
ಈ ಎಲ್ಲವನ್ನು ತಿಳಿದ ಕಳ್ಳರ ಗ್ಯಾಂಗ್ ದೇವಾಲಯದಲ್ಲಿನ ಬಾಗಿಲಿನ ಬೀಗ ತೆಗೆಯಲು ಪ್ರಯತ್ನಿಸಿ, ಅದು ಸಾಧ್ಯವಾಗದೇ ಇದ್ದಾಗ ಬೆಂಕಿ ಹಚ್ಚಿದ್ದಾರೆ ಎಂದು ಶಂಕಿಸಲಾಗಿದೆ. ಹುಣ್ಣಿಮೆ ಕಾರಣಕ್ಕೆ ಸೋಮವಾರ ರಾತ್ರಿ ದೇಗುಲದಲ್ಲಿ ಕಳ್ಳತನ ಅಥವಾ ನಿಧಿ ಶೋಧಕ್ಕೆ ಪ್ರಯತ್ನ ನಡೆದಿದೆ ಎನ್ನುತ್ತಾರೆ ಜನರು.
ದೇವಸ್ಥಾನದ ಗರ್ಭಗುಡಿ ಬಾಗಿಲು ಭದ್ರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸ್ ಶ್ವಾನದಲ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments