ಚಿತ್ರದುರ್ಗ(ಕರ್ನಾಟಕ ವಾರ್ತೆ)ಏ.11:
ತಾಯಿ ಮರಣ ನಿಯಂತ್ರಿಸಲು ಸಾಂಸ್ಥಿಕ ಹೆರಿಗೆ ಮಾಡಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಎಂದರು.
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಸುರಕ್ಷಿತ ಮಾತೃತ್ವ ದಿನದ ಅಂಗವಾಗಿ ಗರ್ಭಿಣಿ ಮಹಿಳೆಯರು ತಾಯಂದಿರಿಗೆ ಸುರಕ್ಷಿತ ತಾಯ್ತನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಯಿಯ ಆರೋಗ್ಯ ಉತ್ತೇಜಿಸಲು ಮತ್ತು ತಾಯಿಯರ ಮರಣ ಕಡಿಮೆ ಮಾಡಲು ಸರ್ಕಾರವು ಈ ದಿನವನ್ನು ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವೆಂದು ಘೋಷಿಸಿತು. ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಏಪ್ರಿಲ್ 11 ರಂದು ಆಚರಿಸಲಾಗುತ್ತದೆ. ಗರ್ಭಿಣಿಗೆ ಹೆರಿಗೆಯ ಮೊದಲು, ಹೆರಿಗೆಯ ಸಮಯದಲ್ಲಿ ಮತ್ತು ನಂತರ ಅಗತ್ಯವಿರುವ ಆರೈಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ ಆಚರಣೆ ಮಾಡಲಾಗುತ್ತದೆ ಎಂದರು.
ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ತಿಮ್ಮೆಗೌಡ ಮಾತನಾಡಿ, ವಿಶ್ವದಾದ್ಯಂತ ಎಲ್ಲ ದೇಶಗಳೂ ಮಾತೃ ಮರಣವನ್ನು ಗಂಭೀರವಾಗಿ ಪರಿಗಣಿಸುತ್ತವೆ. ಕಾರಣ, ಇದು ಆ ದೇಶದ ಆರೋಗ್ಯ ವ್ಯವಸ್ಥೆಯ ಮತ್ತು ಅಭಿವೃದ್ಧಿಯ ಸೂಚ್ಯಂಕವಾಗಿದೆ ಎಂದು ಹೇಳಿದರು.
ಸ್ತ್ರಿ ರೋಗ ತಜ್ಞೆ ಡಾ.ಪವಿತ್ರ ಮಾತನಾಡಿ, ಪ್ರಸವದ ಬಳಿಕ ಮಹಿಳೆಯರ ಮನಸ್ಸು ಸೂಕ್ಷ್ಮವಾಗಿರುತ್ತದೆ. ಈ ಅಂಶವನ್ನು ಅರಿತು ಮನೆಯವರು ಆಕೆಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಕೆಲವು ಬಾಣಂತಿಯರನ್ನು ಕಾಡುವ ಬಾಣಂತಿ ಸನ್ನಿ ಮತ್ತು ಬಾಣಂತನದ ಖಿನ್ನತೆಯ ಲಕ್ಷಣಗಳ ಬಗ್ಗೆಯೂ ಮನೆಯ ಸದಸ್ಯರು ತಿಳಿದಿರಬೇಕು. ತಾಯಿ ಸದಾ ಮಂಕಾಗಿ ಕುಳಿತಿದ್ದರೆ, ಮಗುವಿನ ಆರೈಕೆಯಲ್ಲಿ ಆಸಕ್ತಿ ತೋರದಿದ್ದರೆ, ನಿದ್ರಾಹೀನತೆ ಅಥವಾ ಮಾನಸಿಕ ಕಿರಿಕಿರಿಯಿಂದ ಬಳಲುತ್ತಿದ್ದರೆ, ಅತಿಯಾಗಿ ಸಿಟ್ಟು, ರಂಪಾಟ ಮಾಡುತ್ತಿದ್ದರೆ ನಿರ್ಲಕ್ಷಿಸಬಾರದು. ಇದು ಮಾನಸಿಕ ಸಮಸ್ಯೆ ಇರಬಹುದು ಎಂಬುದನ್ನು ಮನಗಂಡು ಮನೋವೈದ್ಯರ ಬಳಿ ಸಮಾಲೋಚನೆಗೆ ಕರೆದೊಯ್ಯಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಪ್ರಸವದ ಬಳಿಕ ಮಹಿಳೆಯ ಆರೈಕೆಯಲ್ಲಿ ಇಂದಿಗೂ ಅವೈಜ್ಞಾನಿಕ ಪದ್ಧತಿ ಕೆಲವೆಡೆ ಅನುಸರಿಸುತ್ತಿರುವುದು ದುಃಖಕರ. ಬಾಣಂತಿಯರಿಗೆ ಕುಡಿಯಲು ಕೊಡುವ ನೀರಿನ ಪ್ರಮಾಣದಲ್ಲಿ ಕಟ್ಟುನಿಟ್ಟು, ಆಹಾರದಲ್ಲಿ ಹಣ್ಣು, ತರಕಾರಿಗಳ ನಿμÉೀಧ, ಅತಿಯಾದ ತುಪ್ಪದ ಬಳಕೆ ಮೊದಲಾದ ಅಭ್ಯಾಸಗಳು ಸಮಂಜಸವಲ್ಲ. ತಾಯಿ, ಮಗುವಿನ ಸ್ನಾನಕ್ಕೆ ಸುಡುವ ಅತಿ ಬಿಸಿಯಾದ ನೀರನ್ನೇ ಬಳಸಬೇಕೆಂಬ ಪರಿಕಲ್ಪನೆ ಕೂಡ ಅವೈಜ್ಞಾನಿಕವೇ. ಇವು ಪರೋಕ್ಷವಾಗಿ ತಾಯಿ ಮಗುವಿನ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದರು.
ಪ್ರಸವ ಬಹಳ ಮುಖ್ಯವಾದ ಹಂತ. ತಜ್ಞರು ಸೂಚಿಸಿದ ದಿನಾಂಕದಂದು ಅಥವಾ ಯಾವುದೇ ಅಸಾಮಾನ್ಯ ಲಕ್ಷಣಗಳು ಕಂಡುಬಂದ ತಕ್ಷಣವೇ ಆಕೆಯನ್ನು ಸುಸಜ್ಜಿತ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವುದು ಮತ್ತು ಆಕೆಗೆ ಹಿತವೆನಿಸುವ ಆಸ್ಪತ್ರೆಯಲ್ಲಿಯೇ ಪ್ರಸವಕ್ಕೆ ವ್ಯವಸ್ಥೆ ಮಾಡುವುದೂ ಮುಖ್ಯವೆನಿಸುತ್ತವೆ. ಮಧುಮೇಹ ಅಥವಾ ಏರು ರಕ್ತದೊತ್ತಡದಿಂದ ಬಳಲುವ ಗರ್ಭಿಣಿಯರ ಬಗ್ಗೆ ಹೆಚ್ಚು ಕಾಳಜಿ ಅಗತ್ಯ. ಮಹಿಳೆಯರ ಆ ಹಂತದ ಸೂಕ್ಷ್ಮ ಮನಃಸ್ಥಿತಿಯನ್ನು ಕುಟುಂಬದ ಎಲ್ಲ ಸದಸ್ಯರೂ ಅರ್ಥೈಸಿಕೊಂಡಿದ್ದರೆ ಒಳಿತು ಎಂದರು. ಇದೇ ಸಂದರ್ಭದಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಗರ್ಭಿಣಿಯರ ತಪಾಸಣೆ ಮಾಡಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ, ಶ್ರೀಧರ್, ಫಾರ್ಮಸಿ ಆಧಿಕಾರಿ ಮೋಹನ್, ಆರೋಗ್ಯ ಸುರಕ್ಷತಾಧಿಕಾರಿ ಶೋಭಾ ಇದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments