ಹಿರಿಯೂರು:
ಶಾಲೆಗಳ ದಾಖಲಾತಿ ರಿಜಿಸ್ಟರ್ ನಲ್ಲಿ ನಮೂದಾಗಿರುವ ಮಕ್ಕಳ ಹೆಸರು ಮತ್ತು ತಂದೆ ತಾಯಿಗಳ ಹೆಸರು ವಿಳಾಸ, ಜಾತಿ, ಮತ, ಧರ್ಮ, ಹುಟ್ಟಿದ ದಿನಾಂಕ ಇವುಗಳನ್ನು ಯಾವುದೇ ಕಾರಣಕ್ಕೂ ಶಿಕ್ಷಣ ಇಲಾಖೆ ಅನುಮತಿ ಪಡೆಯದೇ ಶಾಲಾ ಮುಖ್ಯಶಿಕ್ಷಕರುಗಳು ತಿದ್ದುವುದಾಗಲಿ ಅಥವಾ ಬದಲಾಯಿಸುವುದಾಗಲಿ ಮಾಡಬಾರದು ಎಂಬುದಾಗಿ ಕ್ಷೇತ್ರ ಶಿಕ್ಷಾಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ನಗರದ ಶ್ರೀಮೋಕ್ಷಗುಡಂ ವಿಶ್ವೇರಯ್ಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಕರೆಯಲಾಗಿದ್ದ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಹಾಗೂ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರುಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಇತ್ತೀಚಿನ ನಿಯಮಾವಳಿಯಂತೆ ಯಾವುದೇ ಮಗುವನ್ನು 1ನೇ ತರಗತಿಗೆ ಸೇರಿಸಿಕೊಳ್ಳಬೇಕಾದರೆ ಆ ಮಗು ಕನಿಷ್ಠ 6 ವರ್ಷಗಳನ್ನು ಪೂರೈಸಿರಬೇಕು. ಯಾವುದೇ ಮಗು 4 ನೇ ವರ್ಷಕ್ಕೆ ಎಲ್ ಕೆ ಜಿ ಮತ್ತು 5ನೇ ವರ್ಷಕ್ಕೆ ಯುಕೆ.ಜಿಯನ್ನು ಮುಗಿಸಿ, 6 ನೇ ವರ್ಷಕ್ಕೆ 1ನೇ ತರಗತಿಗೆ ದಾಖಲಾಗುವಂತೆ ಮುಖ್ಯಶಿಕ್ಷಕರು ನೋಡಿಕೊಳ್ಳಬೇಕು ಎಂದರಲ್ಲದೆ,
ಈ ದಾಖಲಾತಿ ಸಂದರ್ಭದಲ್ಲಿ ಮಕ್ಕಳ ಪೋಷಕರಿಂದ ನಿಖರವಾಗಿ ಮಾಹಿತಿ ಪಡೆದು ದಾಖಲಾತಿ ರಿಜಿಸ್ಟರ್ ನಲ್ಲಿ ದಾಖಲಿಸಿಕೊಳ್ಳಬೇಕು. ಬಹಳಷ್ಠು ಶಾಲೆಗಳಲ್ಲಿ ಶಾಲೆಗಳ ಮುಖ್ಯ ಶಿಕ್ಷಕರುಗಳೇ ದಾಖಲಾತಿ ಅರ್ಜಿನಮೂನೆಯನ್ನು ತುಂಬಿ ಪೋಷಕರಿಂದ ಸಹಿ ಮಾತ್ರ ಮಾಡಿಸಿಕೊಳ್ಳುತ್ತಾರೆ. ಇದು ಸೂಕ್ತವಲ್ಲ, ಮಕ್ಕಳ ಪೋಷಕರಿಂದಲೇ ಅರ್ಜಿ ನಮೂನೆ ಭರ್ತಿ ಮಾಡಿಸಿ, ಸಹಿ ಮಾಡಿಸಿಕೊಳ್ಳಬೇಕು ಎಂದರು.
ಯಾವುದೇ ಮಗುವಿನ ಜೀವನದಲ್ಲಿ ಮಗು ಮೊದಲು ಶಾಲೆಗೆ ಸೇರುವಾಗ ನೀವು ದಾಖಲಿಸುವ ಮಾಹಿತಿಯೇ ಜೀವನದುದ್ದಕ್ಕೂ ಅತ್ಯಂತ ಪ್ರಮುಖ ದಾಖಲೆಯಾಗಿರುತ್ತದೆ. ಈ ದಾಖಲಾತಿ ಮಗು ಬೆಳೆದು ದೊಡ್ಡವನಾಗಿ ಉದ್ಯೋಗ ಮತ್ತಿತರ ಕೋರ್ಸಗಳಿಗೆ ಸೇರುವಾಗ ಬಹುಮುಖ್ಯವಾಗಿ ಪರಿಗಣಿಸಲ್ಪಡುತ್ತದೆ. ಅಲ್ಲದೆ ಕೋರ್ಟ್ ಗಳು ಸಹ ಈ ಶಾಲಾ ದಾಖಲಾತಿಗೆ ಅಧಿಕೃತ ದಾಖಲಾತಿಯ ಮನ್ನಣೆ ನೀಡಿದೆ.
ಇನ್ನು ಖಾಸಗಿ ಶಾಲೆಗಳ ಶಾಲಾಶುಲ್ಕಕ್ಕೆ ಸಂಬಂಧಿಸಿದಂತೆ ಯಾವುದೇ ಶಾಲೆ ತನಗಿಷ್ಟಬಂದಂತೆ ಶಾಲಾಶುಲ್ಕಗಳನ್ನು ಹೆಚ್ಚಿಸುವಂತಿಲ್ಲ. ಕಳೆದ ವರ್ಷ ನೀವು ತಮ್ಮ ಇಲಾಖೆಯಿಂದ ಅನುಮತಿ ಪಡೆದ ಶುಲ್ಕಕ್ಕಿಂತ ಕನಿಷ್ಟ ಶೇಕಡ 15 ರಷ್ಟು ಮಾತ್ರ ಶಾಲಾಶುಲ್ಕ ಹೆಚ್ಚಿಸಬಹುದು. ಅಷ್ಟೆ ಅಲ್ಲದೇ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಶಾಲೆಗಳಲ್ಲಿ ಒದಗಿಸಬೇಕಾಗಿದೆ.
ಅಲ್ಲದೆ ಮಕ್ಕಳಿಗೆ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿಕೊಡಬೇಕು. ಶಾಲೆಗಳಲ್ಲಿ ಸ್ವಚ್ಚತೆ ಹಾಗೂ ನೈರ್ಮಲ್ಯದ ಕಡೆ ಶಾಲಾ ಆಡಳಿತ ಮಂಡಳಿಗಳು ಗಮನಹರಿಸಬೇಕು. ಮಕ್ಕಳಿಗೆ ಆದಷ್ಟು ಪುಸ್ತಕಗಳ ಹೊರೆ ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಆದಿನದ ವೇಳಾಪಟ್ಟಿಗೆ ತಕ್ಕಂತೆ ಪುಸ್ತಕಗಳನ್ನು ಶಾಲೆಗೆ ತರಿಸಿಕೊಂಡರೆ ಮಕ್ಕಳ ಪುಸ್ತಕಗಳ ಬ್ಯಾಗ್ ಹೊರೆ ಕಡಿಮೆಯಾಗುತ್ತದೆ ಎಂದರು.
ಅಷ್ಟೇ ಅಲ್ಲದೆ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳು ಶಿಕ್ಷಣ ಇಲಾಖೆಯಿಂದ ಯಾವ ಮಾಧ್ಯಮಕ್ಕೆ ಅನುಮತಿ ಪಡೆದಿರುತ್ತದೆಯೋ ಅದೇ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಬೇಕು. ಉಳಿದಂತೆ ಬೇರೆ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುವಂತಿಲ್ಲ. ಶಿಕ್ಷಕರಿಗೆ ಅಗತ್ಯ ಸೇವಾಭದ್ರತೆ ಸೇರಿದಂತೆ ಅವರ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಶಶಿಧರ್ ಮಾತನಾಡಿ, ಪ್ರತಿಶಾಲೆಯಲ್ಲಿಯೂ ಮಕ್ಕಳ ಸುರಕ್ಷತೆ ಬಗ್ಗೆ ಆಡಳಿತಮಂಡಳಿ ಮತ್ತು ಶಿಕ್ಷಕ-ಶಿಕ್ಷಕಿಯರು ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ರಚಿಸಬೇಕು. ಕಾಲಕಾಲಕ್ಕೆ ಮಕ್ಕಳ ಕಲಿಕೆ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಪೋಷಕರಸಭೆ ಕರೆದು ಚರ್ಚಿಸುವ ಮೂಲಕ ತಾವು ಕೈಗೊಂಡಿರುವ ಅಗತ್ಯಕ್ರಮಗಳ ಪೋಷಕರಿಗೆ ತಿಳಿಸಬೇಕು.
ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಶಾಲಾ ಆಡಳಿತ ಮಂಡಳಿಯವರು ಹೆಚ್ಚಿನ ಗಮನಹರಿಸಬೇಕು. ಶಾಲಾ ಆವರಣದಲ್ಲಾಗಲೀ, ಶಾಲೆಯಲ್ಲಾಗಲಿ ಹೆಣ್ಣುಮಕ್ಕಳ ಮೇಲೆ ಯಾವುದೇ ರೀತಿಯ ಲೈಗಿಂಕ ದೌರ್ಜನ್ಯ ನಡೆಯದಂತೆ ಎಚ್ಚರಿಕೆ ವಹಿಸಬೇಕು, ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೀತಿನಿಯಮಗಳನ್ನು ರೂಪಿಸಬೇಕು ಎಂದರಲ್ಲದೆ,
ವಿದ್ಯಾರ್ಥಿಗಳಿಗೆ ಫೋಕ್ಸೋ ಕಾಯಿದೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಪೋಲೀಸ್ ಇಲಾಖೆ ಅಥವಾ ವಕೀಲರುಗಳನ್ನು ಶಾಲೆಗೆ ಆಹ್ವಾನಿಸಿ, ಫೋಕ್ಸೋ ಕಾಯಿದೆಯ ಬಗ್ಗೆ ವಿಚಾರ ಸಂಕಿರಣ ನಡೆಸಬೇಕು, ಶಾಲಾ ಆವರಣದಲ್ಲಿ ಮಕ್ಕಳ ಸಹಾಯವಾಣಿಯ, ಮೊಬೈಲ್ ನಂಬರ್ ಹಾಗೂ ದೂರುಪೆಟ್ಟಿಗೆ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು ಎಂಬುದಾಗಿ ಅವರು ಹೇಳಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಪ್ರಸನ್ನ ಕುಮಾರ್ ಮಾತನಾಡಿ, ಶಾಲಾ ಮುಖ್ಯಶಿಕ್ಷಕರು ಹೊರರಾಜ್ಯಗಳಿಂದ ಬರುವ ವಿದ್ಯಾರ್ಥಿಗಳನ್ನು ಸ್ಯಾಟ್ಸ್ ನಲ್ಲಿ ದಾಖಲಿಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು, ಹೊರರಾಜ್ಯದ ವಿದ್ಯಾರ್ಥಿಗಳಿಗೆ ನೇರ ದಾಖಲಾತಿ ಸೌಲಭ್ಯವಿದ್ದು, ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ವಿದ್ಯಾರ್ಥಿಗಳ ಪೆನ್ ನಂಬರ್ ಆಧಾರದ ಮೂಲಕ ನೇರವಾಗಿ ದಾಖಲಾತಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ ಎಂಬುದಾಗಿ ಹೇಳಿದರು.
ಈ ಸಭೆಯಲ್ಲಿ ಕ್ಷೇತ್ರದ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ,ಶಿಕ್ಷಣ ಸಂಯೋಜಕರಾದ ಶಶಿಧರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಪ್ರಸನ್ನ ಕುಮಾರ್, ವಾಣಿವಿಲಾಸ ವಿದ್ಯಾಸಂಸ್ಥೆ ಕಾರ್ಯದರ್ಶಿಗಳಾದ ಆಲೂರುಹನುಮಂತರಾಯಪ್ಪ, ಮೋಕ್ಷಗುಡಂ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಸೂರ್ಯಪ್ರಕಾಶ್, ಕಾರ್ಯದರ್ಶಿಗಳಾದ ಸಣ್ಣಭೀಮಣ್ಣ, ತಾಲ್ಲೂಕು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಎಂ.ವೆಂಕಟೇಶ್, ಸೇರಿದಂತೆ ನಗರದ ವಿವಿಧ ಶಾಲೆಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯಶಿಕ್ಷಕರುಗಳು, ಭಾಗವಹಿಸಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments