ಹಿರಿಯೂರು:
ತಾಲ್ಲೂಕಿನ ವಿವಿ ಪುರ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸುತ್ತಮುತ್ತಲ 11 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಕೆರೆಗಳಿಗೆ ನೀರು ತುಂಬಿಸಬೇಕೆಂಬ ಗ್ರಾಮಸ್ಥರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂಬುದಾಗಿ ತಾಲ್ಲೂಕು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿ ರಮೇಶ್ ಹೇಳಿದರು.
ತಾಲ್ಲೂಕಿನ ಭರಮಗಿರಿ ಗ್ರಾಮದ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು-ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಧರಣಿ ನಿರತರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿ, ನಂತರ ಅವರು ಮಾತನಾಡಿದರು.
ವಾಣಿವಿಲಾಸ ಸಾಗರ ಜಲಾಶಯದ ಬುಡದಲ್ಲಿರುವ 11 ಗ್ರಾಮಗಳ ಪರಿಸ್ಥಿತಿ ದೀಪದ ಕೆಳಗಿನ ಕತ್ತಲು ಎನ್ನುವಂತಾಗಿದೆ. ಜಲಾಶಯ ನಿರ್ಮಿಸಿ ಶತಮಾನ ಕಳೆದರೂ ತಾಲ್ಲೂಕಿನ ಜನತೆಗೆ ಶುದ್ದ ಕುಡಿಯುವ ನೀರು ಸಿಗುತ್ತಿಲ್ಲ. ಅಂತರ್ಜಲ ಅಪಾಯದ ಮಟ್ಟ ತಲುಪಿದೆ. ಕೊಳವೆ ಬಾವಿಗಳ ಸಂಖ್ಯೆ ಮಿತಿ ಮೀರಿದೆ. ಅಡಿಕೆ ಮೇಲಿನ ವ್ಯಾಮೋಹ, ಅತಿಯಾದ ಅಂತರ್ಜಲ ಬಳಕೆಯಿಂದ ಹನಿ ನೀರಿಗೂ ಪರದಾಡುವಂತಾಗಿದೆ ಎಂಬುದಾಗಿ ಕಳವಳ ವ್ಯಕ್ತಪಡಿಸಿದರು.
ಏಕ ಬೆಳೆ ಪದ್ದತಿ ಅಪಾಯ ಎನ್ನುವ ಅರಿವು ರೈತರಿಗೆ ಇದ್ದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ತಾಲ್ಲೂಕಿನ ಜಲಪಾತ್ರೆಗಳು ಬತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿ, ವಿವಿ ಸಾಗರಕ್ಕೆ ಕನಿಷ್ಠ ಹತ್ತು ಟಿಎಂಸಿ ಅಡಿ ನೀರು ತುಂಬಿಸಿದರೆ ಮಾತ್ರ ಜಲ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ ಎಂಬುದಾಗಿ ತಿಳಿಸಿದರು.
ಜನ ಪ್ರತಿನಿಧಿಗಳು- ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು . ಒಂದು ವಾರದಿಂದ ರೈತರು ಪ್ರತಿಭಟಿಸುತ್ತಿದ್ದು, ಜಿಲ್ಲಾ ಸಚಿವರು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಆಲಿಸಬೇಕು, ಇಲ್ಲವಾದಲ್ಲಿ ನಮ್ಮ ಹೋರಾಟವನ್ನು ಇನ್ನೂ ತೀವ್ರಗೊಳಿಸಬೇಕಾಗುತ್ತದೆ ಎಂಬುದಾಗಿ ವಿವಿಪುರ ಗ್ರಾಮಸ್ಥರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿವಿ ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಉಮೇಶ್, ಗ್ರಾಮಸ್ಥರಾದ ಬಿ.ಎಸ್. ಕೆಂಚಪ್ಪ, ತಳವಾರಹಟ್ಟಿ ತಿಮ್ಮರಾಜ್ , ಮುನ್ನಾ, ಕವಿತಾಕಣುಮಪ್ಪ, ಬಿ.ಕೆ.ಲೋಕೇಶ್, ಜಯರಾಮಯ್ಯ, ಕಾಂತರಾಜ್, ಎನ್. ಮಂಜುನಾಥ್, ಯೋಗೇಶ್ವರ್, ಕಕ್ಕಯ್ಯನ ಹಟ್ಟಿ ಚಂದ್ರಪ್ಪ, ಕೆ.ಆರ್. ತಿಪ್ಪೇಸ್ವಾಮಿ, ಕಾಂತಣ್ಣ, ವೆಂಕಟಾಚಲಯ್ಯ,ಅಗಳೇರಟ್ಟಿ ನಾಗರಾಜ್, ಕುರುಬರಹಳ್ಳಿ ರಘುನಾಯ್ಕ್, ಕೆರೆ ಸಮಿತಿ ಅಧ್ಯಕ್ಷ ವೀರಭದ್ರಪ್ಪ, ಮೂರ್ತಿ, ಮೂಡ್ಲಪ್ಪ, ಓಂಕಾರಪ್ಪ, ರಮೇಶ್, ವಂದೇ ಮಾತರಂ ವೇದಿಕೆಯ ದೇವರಾಜ್, ನಾಗಣ್ಣ, ಎಸ್.ಕೆ.ರಘು, ಕಸವನಹಳ್ಳಿ ರಾಮಚಂದ್ರ, ಚಂದ್ರಕಾತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments