ಹಿರಿಯೂರು:
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಕೆಳಭಾಗದಲ್ಲಿರುವ ನೆಲೆಸಿರುವ ವಾಣಿವಿಲಾಸ ಸಾಗರ ಜಲಾಶಯದ ರಕ್ಷಕಿ ಎಂದೇ ಪ್ರಸಿದ್ದಳಾದ ಕಣಿವೆಮಾರಮ್ಮ ದೇವಿಯ ವೈಭವದ ರಥೋತ್ಸವ ಶುಕ್ರವಾರ ಜಲಾಶಯದ ಬಳಿ ಇರುವ ದೇವಾಲಯದ ಆವರಣದಲ್ಲಿ ಸಡಗರ-ಸಂಭ್ರಮದಿಂದ ನೆರವೇರಿತು.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಣಿವೆ ಮಾರಮ್ಮ ದೇವಿಯ ವಿಗ್ರಹ ಜಲಾಶಯದ ಕಡೆ ಮುಖ ಮಾಡಿ ಅಣೆಕಟ್ಟೆಯನ್ನು ಕಾಲಲ್ಲಿ ಒದ್ದು ಕುಳಿತಿರುವ ಭಂಗಿಯಲ್ಲಿರುವುದರಿಂದ ಈ ಭಾಗದ ಜನರಲ್ಲಿ ಕಣಿವೆ ಮಾರಮ್ಮ ದೇವಿಯು ವಾಣಿ ವಿಲಾಸ ಸಾಗರದ ರಕ್ಷಕಿ ಎಂಬ ನಂಬಿಕೆ ಮನೆಮಾಡಿದೆ. ಎರಡು ಗುಡ್ಡಗಳ ನಡುವಿನ ಪ್ರದೇಶದಲ್ಲಿ ವಾಣಿವಿಲಾಸ ಸಾಗರ ಅಣೆಕಟ್ಟೆ ನಿರ್ಮಿಸಲಾಗಿದೆ
ಎರಡು ಗುಡ್ಡಗಳ ನಡುವಿನ ಕಣಿವೆಯಂತಹ ಪ್ರದೇಶದಲ್ಲಿ ಈ ದೇಗುಲವನ್ನು ನಿರ್ಮಿಸಿರುವ ಕಾರಣ ಈ ದೇವಿಗೆ ಕಣಿವೆಮಾರಮ್ಮ ದೇವಿ ಎಂಬ ಹೆಸರು ಬಂದಿದೆ. ಈ ದೇವಿಯ ದರ್ಶನಕ್ಕೆ ಸ್ಥಳೀಯರಲ್ಲದೆ ನೆರೆಯ ರಾಜ್ಯಗಳಾದ ಆಂದ್ರಪ್ರದೇಶ, ತಮಿಳುನಾಡಿನಿಂದಲೂ ನೂರಾರು ಜನ ಜಾತ್ರೆಗೆ ಬಂದು ತಮ್ಮ ಹರಕೆ ತೀರಿಸುವುದು ರೂಡಿಯಲ್ಲಿದೆ.
ಜಾತ್ರೋತ್ಸವದ ನಿಮಿತ್ತ ಗಂಗಾಪೂಜೆ, ಜಲಧಿ ಉತ್ಸವ, ಹೋಮ, ಸಿಡಿ ಉತ್ಸವ, ಹೋಮ ಹವನ,ಕಳಸ ಪ್ರತಿಷ್ಟಾಪನೆ, ದೇವಿಗೆ ನೈವೇದ್ಯ, ಆರತಿ,ಅನ್ನಸಂತರ್ಪಣೆ ಸೇರಿ ಇತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಹಸಿರು ತೋರಣ ಹಾಗೂ ಬಣ್ಣ-ಬಣ್ಣದ ಬಟ್ಟೆ ಹಾಗೂ ಹೂಮಾಲೆಗಳಿಂದ ಅಲಂಕರಿಸಿದ ರಥದಲ್ಲಿ ದೇವಿಯ ಉತ್ಸವಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು.
ಈ ಸರ್ವಾಲಂಕಾರಗೊಂಡ ರಥಕ್ಕೆ ದೇವಸ್ಥಾನ ಸಮಿತಿ ಹಾಗೂ ಮುಖ್ಯಸ್ಥರಿಂದ ಕಳಸಪೂಜೆ, ಈಡುಗಾಯಿ, ಬಲಿಅನ್ನ, ಕುಂಬಳಕಾಯಿ ಅರ್ಪಣೆ ಮಹಾಮಂಗಳಾರತಿ ನಂತರ ಸಂಜೆ 4 ಗಂಟೆಗೆ ಭಕ್ತರು ತೇರನ್ನು ದೇವಸ್ಥಾನದ ಆವರಣದಿಂದ ಎಳೆದರು. ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಮಂಡಕ್ಕಿ ತೂರಿ ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಸಿಡಿ ಉತ್ಸವ ಸೇರಿದಂತೆ ಅಮ್ಮನವರು ಗುಡ್ಡ ಇಳಿಯುವುದು,ಭರಮಗಿರಿಕೆರೆ ಹಿಂಭಾಗದಲ್ಲಿ ದೊಡ್ಡ ಎಡೆ ಸೇವೆ ಮುಗಿಸಿಕೊಂಡು ಅಮ್ಮನವರು ಗುಡ್ಡ ಹತ್ತುವುದು,ಚಪ್ಪರ ಇಳಿಸುವುದು, ಸಣ್ಣ ಪುಲ್ಲಪ್ಪ ಮನೆ ಅಂಗಳದ ಬೇವಿನ ಮರದ ಬಳಿ ವಿಶೇಷ ಪೂಜೆ ಇತರ ಧಾರ್ಮಿಕ ಕಾರ್ಯಗಳನ್ನು ವಿಧಿ ವಿಧಾನಗಳಿಂದ ನೆರವೇರಿಸಲಾಯಿತು.
ಈ ಜಾತ್ರೋತ್ಸವ ಪ್ರಯುಕ್ತ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಳನ್ನು ಹಮ್ಮಿಕೊಳ್ಳಲಾಗಿದ್ದು ಡೊಳ್ಳು ಕುಣಿತ ವೀರಗಾಸೆ, ರಸಮಂಜರಿ ಸೇರಿದಂತೆ ಇತರ ಧಾರ್ಮಿಕ ಸೊಗಡಿನ ಕಾರ್ಯಕ್ರಮಗಳು ನೆರವೇರಿದವು. ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು.
ಈ ರಥೋತ್ಸವ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ದೇಗುಲಕ್ಕೆ ಭೇಟಿ ನೀಡಿ ಈ ಭಾಗದ ಶಕ್ತಿ ದೇವತೆ ಕಣಿವೆ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಕ್ತವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆ-ಬೆಳೆಯಾಗಿ ಜಿಲ್ಲೆಯ ಜನರು ಹಾಗೂ ರೈತರು ಸಮೃದ್ಧಯುತವಾದ ಹಾಗೂ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂಬುದಾಗಿ ಅವರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ರೈತ ಕಾರ್ಮಿಕ ಸಂಘದ ಮುಖಂಡರು, ದೇವಸ್ಥಾನದ ಸಮಿತಿ ಮುಖ್ಯಸ್ಥರು, ಆದಿಜಾಂಬವ, ಯಾದವ, ತಳವಾರ, ಹಳ್ಳಿಕಾರ್, ವಾಲ್ಮಿಕಿ ವಂಶಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments