ಹಿರಿಯೂರು :
ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಸೇರಿದಂತೆ ಎಲ್ಲಾ ಕೆರೆಗಳಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸೋಮವಾರ ಜವನಗೊಂಡನಹಳ್ಳಿ ಬಂದ್ ಗೆ ಕರೆ ನೀಡಲಾಗಿತ್ತು ಈ ಬಂದ್ ಭಾಗಶಃ ಯಶಸ್ವಿಯಾಯಿತು ಎಂಬುದಾಗಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹೋಬಳಿಯ ಕೇಂದ್ರ ಸ್ಥಳದಲ್ಲಿ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿಕೊಂಡು ಬಂದ್ ಗೆ ಬೆಂಬಲ ಸೂಚಿಸಿದರು. ಪ್ರತಿಭಟನಾಕಾರರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ನಂತರ ಗಣೇಶ ದೇವಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರಾದ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಿಂದಲೇ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸುವ ಯೋಜನೆಯನ್ನು ಸುಲಭವಾಗಿ ಮಾಡಬಹುದಿತ್ತು. ಆದರೆ,ಅಧಿಕಾರಿಗಳು ಹಾಗೂ ರಾಜಕಾರಣಿಗಳು ದುಡ್ಡು ಮಾಡುವ ನಿಟ್ಟಿನಲ್ಲಿ ಕಾಮಗಾರಿಯನ್ನು ದಿಕ್ಕು ತಪ್ಪಿಸಲಾಯಿತು ಎಂಬುದಾಗಿ ಆಪಾದಿಸಿದರು.
ಭದ್ರಾ ಮೇಲ್ದಂಡೆ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ಸೇರಿದಂತೆ ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬವಾಗುತ್ತಲೇ ಇದೆ ಎಂಬುದಾಗಿ ಅವರು ಆರೋಪಿಸಿದರು.ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕಿನಲ್ಲಿ 543 ದಿನ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ವಿಷಯ ತಿಳಿದ ತಕ್ಷಣ ಆಗಿನ ನೀರಾವರಿ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಸ್ಥಳಕ್ಕೆ ಬಂದು ಭದ್ರಾದಿಂದ ವಾಣಿವಿಲಾಸ ಸಾಗರ 5 ಟಿಎಂಸಿ ನೀರು ಹರಿಸಲು ಅಲೋಕೆಷನ್ ಮಾಡಿದ ಪರಿಣಾಮವಾಗಿ ಪ್ರತಿಭಟನೆ ಹಿಂಪಡೆಯಲಾಯಿತು.
ನಮ್ಮ ತಾಲ್ಲೂಕಿನಲ್ಲಿ ಡ್ಯಾಂ ಇದ್ದರೂ ಸಹ ತಾಲ್ಲೂಕಿನ ಜನರಿಗೆ ನೀರು ಸಿಗದಿರುವುದು ದುರಂತ. ಗಾಯಿತ್ರಿ ಜಲಾಶಯ ಸೇರಿದಂತೆ ಸುಮಾರು 15 ಕೆರೆಗಳಿಗೆ ನೀರು ಹರಿಸಿದರೆ ಈ ಭಾಗದ ರೈತರ ಬದುಕಾದರೂ ಹಸನಾಗುತ್ತದೆ.
ಬೇಸಿಗೆ ಬಂದರೆ ಸಾಕು ನೀರಿನ ಹಾಹಾಕಾರ ತಾಲೂಕಿನಲ್ಲಿ ಮೊದಲು ತಟ್ಟುವುದೇ ಜವಗೊಂಡನಹಳ್ಳಿ ಹೋಬಳಿಗೆ ಹಾಗಾಗಿ ಈ ಭಾಗದ ಕೆರೆಗಳಿಗೆ ವಿವಿ ಸಾಗರದ ನೀರು ಹರಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರಲ್ಲದೆ,
ತುಂಗಾಭದ್ರಾದಿಂದ ಭದ್ರಾ ಕಾಮಗಾರಿ ಸಂಪೂರ್ಣ ಮುಗಿಯುವವರೆಗೂ ತಾಲ್ಲೂಕಿನಲ್ಲಿ ಯಾವುದೇ ಹನಿ ನೀರಾವರಿ ಕಾಮಗಾರಿ ಮಾಡದಂತೆ ಸ್ಥಗಿತಗೊಳಿಸಬೇಕು. ಜೊತೆಗೆ ಈಗಾಗಲೇ ನಡೆದಿರುವ ಕಾಮಗಾರಿ ಯಾವುದು ಬಿಲ್ ಮಾಡಬಾರದು ಎಂಬುದಾಗಿ ಅವರು ತಿಳಿಸಿದರು.
ಧರ್ಮಪುರ ಕೆರೆಗೆ ನೀರು ಹರಿಸುವಂತೆ ರೈತ ಸಂಘ ಹೋರಾಟ ನಡೆಸಿದ್ದರಿಂದ ಇದೀಗ ಆ ಭಾಗದಲ್ಲಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುತ್ತಿರುವುದರಿಂದ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಶಸ್ವಿಯಾಗಿದೆ. ಅದೇ ರೀತಿ ಜೆಜೆ ಹಳ್ಳಿ ಹೋಬಳಿಯಲ್ಲೂ ಬೇಡಿಕೆ ಈಡೇರಿಸುವವರೆಗೂ ರೈತ ನಿರಂತರ ಹೋರಾಟ ಮಾಡುತ್ತದೆ ಎಂಬುದಾಗಿ ತಿಪ್ಪೇಸ್ವಾಮಿ ತಿಳಿಸಿದರು.
ಮುಖಂಡ ಜೆಜಿ ಹಳ್ಳಿ ಮಂಜುನಾಥ್ ಮಾತನಾಡಿ ನಮ್ಮ ಹೋಬಳಿಯಲ್ಲಿ ಹೋರಾಟ ಇಲ್ಲದಿರುವುದರಿಂದ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ತಾಲೂಕು ಅಭಿವೃದ್ಧಿಯಾಗಲಿ ಎಂದು ನಾವು ಶ್ರಮ ಹಾಕಿ ಜನಪ್ರತಿನಿಧಿಗಳನ್ನು ಗೆಲ್ಲಿಸಿದರೆ ಅವರೇ ಅಭಿವೃದ್ಧಿಯಾಗುತ್ತಿದ್ದಾರೆ ಎಂದರಲ್ಲದೆ,
ಶಿರಾ ಶಾಸಕ ಟಿಬಿ ಜಯಚಂದ್ರರವರು ಕೃಷಿ ಮತ್ತು ನೀರಾವರಿಗೆ ಕೊಡುವ ಆದ್ಯತೆ ನಮ್ಮಲ್ಲೂ ಆಗಬೇಕಿದೆ. ಇತ್ತೀಚಿಗಷ್ಟೇ ಸಂಸದರಾಗಿ ಆಯ್ಕೆಯಾಗಿರುವ ಗೋವಿಂದ ಕಾರಜೋಳ ರವರು ಜವನಗೊಂಡನಹಳ್ಳಿ ಹೋಬಳಿ ಭಾಗದಲ್ಲಿ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಲು ಭರವಸೆ ನೀಡಿರುವುದು ಸದ್ಯದ ಆಶಾದಾಯಕ ಬೆಳವಣಿಗೆ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿ.ಬಿ.ಪಾಪಣ್ಣ ಮಾತನಾಡಿ, ಕಳೆದ ಆರು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಜಲಾಶಯದಿಂದ ಗಾಯಿತ್ರಿ ಜಲಾಶಯಕ್ಕೆ ನೀರು ಹರಿಸುವಂತೆ ಒತ್ತಾಯಿಸಲಾಗಿತ್ತು. 27 ಕಿಲೋಮೀಟರ್ ದೂರದಿಂದ 14 ಚೆಕ್ ಡ್ಯಾಂ ತುಂಬಿಕೊಂಡು ಗಾಯಿತ್ರಿ ಜಲಾಶಯಕ್ಕೆ ನೀರು ಹರಿಸಲಾಯಿತು.
ಮೊಳಕಾಲ್ಮೂರು, ಚಳ್ಳಕೆರೆ, ಆಂಧ್ರಪ್ರದೇಶದವರೆಗೂ ವಿವಿ ಸಾಗರದ ನೀರು ಹರಿಸುತ್ತಾರೆ. ಆದರೆ ಇಲ್ಲಿನವರಿಗೆ ನೀರು ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಿದೆ.
ಮಾಜಿ ಸಂಸದ ಕೋದಂಡರಾಮಯ್ಯನವರು ನೀರಿನ ಹೋರಾಟಕ್ಕೆ ಧುಮುಕಿದ ಪರಿಣಾಮವಾಗಿ ಇಂದು ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿ ವಿಲಾಸ ಸಾಗರ ಡ್ಯಾಂಗೆ ನೀರು ಬರಲು ಸಾಧ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರಿಗೆ ಈ ಭಾಗಕ್ಕೆ ನೀರು ತರುವುದು ದೊಡ್ಡ ಸವಾಲು ಅಲ್ಲ. ಜವನಗೊಂಡನಹಳ್ಳಿ ಹೋಬಳಿಗೆ ನೀರು ಕೊಡಲಾಗುತ್ತದೆ ಎಂದು ಕಾಮಗಾರಿ ಮಾಡಲಾಗುತ್ತಿದೆ.
ನೀರೇ ಇಲ್ಲದಿರುವುದರಿಂದ ಕಾಮಗಾರಿ ಯಾಕೆ ಆರಂಭಿಸಿದ್ದಾರೆ ಎಂದು ತಿಳಿಯುತ್ತಿಲ್ಲ. ಗಾಯಿತ್ರಿ ಜಲಾಶಯಕ್ಕೆ ಮೊದಲು ನೀರಿನ ಅಲೋಕೆಷನ್ ಮಾಡಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆ ಸ್ಥಳಕ್ಕೆ ತಹಸೀಲ್ದಾರ್ ರಾಜೇಶ್ ಕುಮಾರ್ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ ಸರ್ಕಾರಕ್ಕೆ ನಿಮ್ಮ ಬೇಡಿಕೆಯನ್ನು ತಲುಪಿಸುವ ಕೆಲಸ ಮಾಡುತ್ತೇವೆ ಎಂಬುದಾಗಿ ಅವರು ಭರವಸೆ ನೀಡಿದರು.
ಒಂದು ವಾರದೊಳಗೆ ಅಧಿಕಾರಿಗಳು ನೀರು ಹರಿಸಲು ಸ್ಪಷ್ಟ ನಿರ್ಧಾರ ತಿಳಿಸಬೇಕು.ಅಧಿಕಾರಿಗಳು ನಿರ್ಧಾರ ತಿಳಿಸದಿದ್ದಲ್ಲಿ ಮುಂದಿನ ಸೋಮವಾರದಿಂದ ಜೆಜೆ ಹಳ್ಳಿ ಪಂಚಾಯಿತಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಎಚ್ಚರಿಸಿದರಲ್ಲದೆ,
ಹೋರಾಟದ ಬಗ್ಗೆ ಪ್ರತಿಯೊಂದು ಗ್ರಾಮಗಳಲ್ಲಿ ಜಾಗೃತಿ ಸಭೆ ನಡೆಸಿ ಮೂಡಿಸಿ, ಚಿತ್ರದುರ್ಗಕ್ಕೆ ಪಾದಯಾತ್ರೆ ಕೈಗೊಳ್ಳಲಾಗುವುದು.ಜೆಜೆ ಹಳ್ಳಿ ಗಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು. ಪ್ರತಿಭಟನೆಗೆ ಸರ್ಕಾರ ಮಣಿಯದಿದ್ದರೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಹಂತ-ಹಂತವಾಗಿ ಹೋರಾಟಕ್ಕೆ ರೈತ ಸಂಘ ಮುಂದಾಗಲಿದೆ ಎಂಬುದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಜೆಜೆ ಹಳ್ಳಿ ಹೋಬಳಿ ತಾಲ್ಲೂಕಿನಲ್ಲಿಯೇ ಅತ್ಯಂತ ಹೆಚ್ಚಿನ ನೀರಿನ ತೊಂದರೆ ಅನುಭವಿಸುವ ಹೋಬಳಿಯಾಗಿದೆ. ಬೇಸಿಗೆ ಬಂದರೆ ಸಾಕು ರೈತರ ಜಮೀನುಗಳ ಜೊತೆಗೆ ಜನರಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿಬಿಡುತ್ತದೆ. ನಮ್ಮ ಪಂಚಾಯ್ತಿ ವ್ಯಾಪ್ತಿಯ ಅರಿಶಿನಗುಂಡಿ ಮತ್ತು ಹೊನ್ನಾಳ್ ಕೆರೆಗೆ ನೀರು ಹರಿದರೆ ನಮ್ಮ ಯಲ್ಲದಕೆರೆ ಪಂಚಾಯ್ತಿ ವ್ಯಾಪ್ತಿಯ ಬಹಳಷ್ಟು ಹಳ್ಳಿಗಳಿಗೆ ನೀರಿನ ತೊಂದರೆ ತಪ್ಪುತ್ತದೆ. ಹಾಗಾಗಿ ಆದಷ್ಟು ಬೇಗ ನಮ್ಮ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕಿದೆ.
ಯಲ್ಲದಕೆರೆ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಬ್ಯಾರಮಡು, ,ಮುಖಂಡರಾದ ಆಲೂರು ಸಿದ್ದರಾಮಣ್ಣ, ಹುಣಸೆಹಳ್ಳಿ ಶಶಿಧರ್, ಪಿಎಸ್. ಪಾತಯ್ಯ, ಕಣ್ಣಪ್ಪ, ತಿಮ್ಮರಾಯಪ್ಪ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಟಿ. ಮಂಜಣ್ಣ, ಜೆಜೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಲ್ತಾಫ್, ಕರಿಯಾಲ ಪಂಚಾಯ್ತಿ ಅಧ್ಯಕ್ಷೆ ವಿಜಯಮ್ಮ, ಎಂಆರ್ ವೀರಣ್ಣ, ಗೋವಿಂದರಾಜು,ರಂಗಸ್ವಾಮಿ, ಶಿವಣ್ಣ, ಕೆಆರ್ ಹಳ್ಳಿ ರಾಜಣ್ಣ, ವೀರಣ್ಣ, ಮಹಾಂತೇಶ್ , ಆನೆಸಿದ್ರೆ ಶಿವಣ್ಣ, ಬಾಲು, ರಾಮಕೃಷ್ಣ, ಮಂಜುನಾಥ್, ಈರಣ್ಣ, ಸೇರಿದಂತೆ ಸುತ್ತಲಿನ ನೂರಾರು ರೈತರು ಹಾಜರಿದ್ದರು.
0 Comments