ಚಳ್ಳಕೆರೆ: ನಗರದ ತಾಲೂಕು ಕಚೇರಿಯಲ್ಲಿ ತಹಸಿಲ್ದಾರ್ ರೆಹನ್ ಪಾಷಾ ನೇತೃತ್ವದಲ್ಲಿ ರೈತರ ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಯಿತು.
ಈ ವೇಳೆ ಮಾತಾಡಿದ ರೈತ ಮುಖಂಡ ರೆಡ್ಡಿ ಹಳ್ಳಿ ವೀರಣ್ಣ ತಾಲೂಕಿನಲ್ಲಿ ಮಳೆ ಬಾರದೆ ಬರಗಾಲದ ಪರಿಸ್ಥಿತಿ ಆವರಿಸಿದ್ದು ಸರ್ಕಾರವೇ ಚಳ್ಳಕೆರೆ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದರು ಸಹ ಬ್ಯಾಂಕ್ ಅಧಿಕಾರಿಗಳು ರೈತರ ಬೆಳೆ ಸಾಲಗಳಿಗೆ ನೋಟಿಸ್ ಜಾರಿ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಂದುವರೆದು ಮಾತನಾಡುತ್ತಾ ರೈತರ ಖಾತೆಗಳಿಗೆ ಸರ್ಕಾರದ ಯೋಜನೆಗಳ ಹಣ ಬಂದಿದ್ದರು ಆ ಹಣವನ್ನು ಸಾಲದ ಖಾತೆಗೆ ಜಮಗೊಳಿಸಿ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದಾರೆ ಇದರಿಂದಾಗಿ ರೈತರು ತಮ್ಮ ಜೀವನವನ್ನು ನಡೆಸಲು ಕಷ್ಟಕರವಾಗುತ್ತಿದೆ ರೈತ ಮಹಿಳೆಯರು ತಮ್ಮ ದಿನ ನಿತ್ಯದ ಜೀವನವನ್ನು ಸಾಗಿಸಲು ಖಾಸಗಿ ಸಂಸ್ಥೆಗಳ ಸಂಘಗಳಲ್ಲಿ ಸಾಲವನ್ನು ಪಡೆದಿರುತ್ತಾರೆ ಆ ಹಣವು ಖಾತೆಗಳಿಗೆ ಜಮಾ ಆಗುತ್ತಿದ್ದಂತೆ ಆ ಹಣವನ್ನು ಸಹ ಸಾಲಕ್ಕೆ ಜಮೆ ಮಾಡಿಕೊಳ್ಳುವುದು ಸರಿಯಲ್ಲ ಇಂತಹ ಕ್ರಮಗಳನ್ನು ಬ್ಯಾಂಕ್ ಅಧಿಕಾರಿಗಳು ಇನ್ನು ಮುಂದೆ ಅನುಸರಿಸಕೂಡದು ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಬ್ಯಾಂಕುಗಳ ಮುಂದೆ ರೈತರು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ತಿಪ್ಪಾರೆಡ್ಡಿ ಮಾತನಾಡಿ ನಗರದಲ್ಲಿ ಖಾಸಗಿ ಕಂಪ್ಯೂಟರ್ ಸೆಂಟರ್ ಗಳಲ್ಲಿ ಜಾತಿ ಪ್ರಮಾಣ ಪತ್ರ ಪಹಣಿ ಪಡೆಯಲು ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು ಇದಕ್ಕೆ ತಾಲೂಕು ಆಡಳಿತ ಕಡಿವಾಣ ಹಾಕಬೇಕು ಎಫ್ ಐ ಡಿ ಮಾಡಿಸಲು ಹೋದಾಗ ಪಿತ್ರಾರ್ಜಿತ ಪಹಣಿಗಳಲ್ಲಿ ಬದಲಾವಣೆ ಆಗದಿದ್ದ ಸಂದರ್ಭದಲ್ಲಿ ಲೋಪದೋಷಗಳು ಕಂಡುಬಂದಿರುವುದರಿಂದ ಎಫ್ ಐ ಡಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ತ್ವರಿತ ಗತಿಯಲ್ಲಿ ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ರೆಹಾನ್ ಪಾಷಾ ಮಾತನಾಡಿ ತಾಲೂಕಿನಲ್ಲಿ ಬರದ ಪರಿಸ್ಥಿತಿ ಇರುವುದರಿಂದ ಬ್ಯಾಂಕ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ರೈತರ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬರುವುದು ಅಥವಾ ಪೋಸ್ಟ್ಗಳ ಮೂಲಕ ಕಳುಹಿಸುವುದು ಮಾಡಬಾರದು ಈ ರೀತಿಯಾಗಿ ಕಂಡುಬಂದರೆ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ರೈತರು ಬೆಳೆ ಪರಿಹಾರ ಪಡೆಯಲು ತಕ್ಷಣವೇ ಎಫ್ ಐ ಡಿ ಮಾಡಿಸಬೇಕು ಎಫ್ ಐ ಡಿ ಮಾಡಿಸಿದಲ್ಲಿ ಸರ್ಕಾರ ಘೋಷಣೆ ಮಾಡಿರುವ 2000 ಬರ ಪರಿಹಾರ ಹಣವು ನೇರವಾಗಿ ಖಾತೆಗೆ ಜಮಾ ಆಗಲಿದೆ ತಕ್ಷಣವೇ ಎಫ್ ಐ ಡಿ ಮಾಡಿಸಿ ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳಬೇಕು ಈಗಾಗಲೇ ತಾಲೂಕಿನಲ್ಲಿ ಸುಮಾರು 75,000 ರೈತರು ಎಫ್ ಐಡಿ ಮಾಡಿಸಿದ್ದು ಬಾಕಿ ಉಳಿದಿರುವ ರೈತರು ಕೂಡಲೇ ಎಫ್ ಐ ಡಿ ಮಾಡಿಸಿ ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿದ ಬ್ಯಾಂಕ್ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು
ಈ ವೇಳೆ ರೈತ ಮುಖಂಡರಾದ ಸುರೇಶ್ ರಾಜಣ್ಣ ಶ್ರೀಕಂಠ ಮೂರ್ತಿ ಹನುಮಂತಪ್ಪ ತಿಪ್ಪಾರೆಡ್ಡಿ ಯರ್ರಿಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments