ಹಿರಿಯೂರು :
ಪ್ರಕೃತಿಯಲ್ಲಿ ಸಹಜವಾಗಿ ಲಭ್ಯವಿರುವ ಸೂರ್ಯನ ಕಿರಣಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸಿದಲ್ಲಿ ರೈತರು ಲಾಭದಾಯಕ ಕೃಷಿ ಮಾಡಬಹುದಾಗಿದೆ ಎಂಬುದಾಗಿ ಮೈಸೂರಿನ ಕೃಷಿಕ ಹಾಗೂ ಲೇಖಕ ಟಿ.ಜಿ.ಎಸ್.ಅವಿನಾಶ್ ಸಲಹೆ ನೀಡಿದರು.
ನಗರದ ಪ್ರವಾಸಿಮಂದಿರದ ಸಭಾಂಗಣದಲ್ಲಿ ಉಳುಮೆ ಪ್ರತಿಷ್ಠಾನ, ಹಿರಿಯ ರೈತರು ಮತ್ತು ತಜ್ಞರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬೆಳಕಿನ ಬೇಸಾಯ ಕೃಷಿ ಪದ್ಧತಿಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಳಕಿನ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಒಂದು ಎಕರೆ ಜಮೀನಿನಲ್ಲಿ ವರ್ಷಕ್ಕೆ 22 ಸಾವಿರ ಕೆ.ಜಿ.ಯಷ್ಟು ಆಹಾರ ಧಾನ್ಯ ಉತ್ಪಾದಿಸಬಹುದು, ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಆಹಾರ ಧಾನ್ಯ ಬೆಳೆದಲ್ಲಿ ಕೃಷಿಯಲ್ಲಿನ ನಷ್ಟ ತಪ್ಪಿಸಬಹುದು ಎಂಬುದಾಗಿ ಮಾಹಿತಿ ನೀಡಿದರು.
ಗುಣಮಟ್ಟದ ಆಹಾರ ಧಾನ್ಯಗಳ ಉತ್ಪಾದನೆಗೆ ಕನಿಷ್ಠ 15 ರಿಂದ 35 ಡಿಗ್ರಿ ತಾಪಮಾನ ಬೇಕು, ಆದರೆ ಪ್ರಸ್ತುತ ತಾಪಮಾನ 40 ಡಿಗ್ರಿವರೆಗೆ ಹೆಚ್ಚಿದ್ದು, ಇಂತಹ ಸಮಯದಲ್ಲಿ ಬೆಳಕಿನ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಪಡೆಯುವ ಅಗತ್ಯವಿದೆ. ಇದರಿಂದ ಸರಾಸರಿ ಪ್ರತಿ ರೈತ ಮಾಸಿಕ 15 ಸಾವಿರದವರೆಗೆ ಆದಾಯ ಪಡೆಯಬಹುದು ಎಂದರಲ್ಲದೆ,
ಇದನ್ನು ಸಾಧ್ಯ ಮಾಡಿಕೊಳ್ಳಲು ಕೃಷಿ ಭೂಮಿಯನ್ನು ಆಹಾರ ಬನವನ್ನಾಗಿ ಪರಿವರ್ತಿಸಿಕೊಳ್ಳಬೇಕು ಒಂದು ಎಕರೆಯಲ್ಲಿ ಕನಿಷ್ಠ 30 ವಿವಿಧ ಪ್ರಭೇದದ 1500 ಮರಗಿಡಗಳು ಇರುವಂತೆ ನೋಡಿಕೊಂಡಲ್ಲಿ ಪ್ರಕೃತಿದತ್ತವಾಗಿ ರೋಗರುಜಿನಗಳನ್ನು ತಡೆಯುವ ಜೊತೆಗೆ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬಹುದು
ಈ ಮೂಲಕ ಜೀವಾಣುಗಳ ವೈವಿಧ್ಯತೆ ಸಂರಕ್ಷಣೆಗೊಂಡು, ಸಸ್ಯ ಪೋಷಕಾಂಶಗಳನ್ನು ಪ್ರಕೃತಿದತ್ತವಾಗಿ ಪಡೆಯಬಹುದಾಗಿದೆ, ಪ್ರಮುಖವಾಗಿ ಟ್ರೆಂಚಸ್ ವಿಧಾನದಲ್ಲಿ ಪ್ರತಿವರ್ಷವೂ ಪ್ರತಿ ಎಕರೆಯಿಂದ ಸುಮಾರು 5 ಲಕ್ಷ ಲೀಟರ್ ನೀರನ್ನು ಭೂಮಿಯಲ್ಲಿ ಇಂಗಿಸಬಹುದು, ರೈತರು ಹೆಚ್ಚಾಗಿ ಮಳೆಯ ನೀರನ್ನೇ ಬಳಸಿ ಕೃಷಿ ಚಟುವಟಿಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಪ್ರಸ್ತುತ ವರ್ಷ ಕಾರ್ಯಾಗಾರ ನಡೆಸುವುದರ ಜೊತೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಒಂದೊಂದು ಎಕರೆ ಪ್ರದೇಶದಲ್ಲಿ ಆಹಾರಬನದ ಮಾದರಿ ತೋಟವನ್ನು ನಿರ್ಮಿಸುವ ಗುರಿ ಹೊಂದಿದ್ದು, ಮಾದರಿ ತೋಟ ನಿರ್ಮಿಸಲು ಹಲವು ರೈತರು ಆಸಕ್ತಿ ತೋರಿಸಿದ್ದಾರೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ರೈತಮುಖಂಡರಾದ ಕೆ.ಸಿ.ಹೊರಕೇರಪ್ಪ, ಕಸವನಹಳ್ಳಿ ರಮೇಶ್, ದಸ್ತಗೀರ್ ಸಾಬ್, ಬ್ಯಾಡರಹಳ್ಳಿ ಶಿವಕುಮಾರ್, ಆರ್.ಚೇತನ್, ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments