ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ವಿವಾಹ ಕಾರ್ಯಕ್ರಮಗಳಿಗೆ ರಾಜಕಾರಣಿಗಳು ಚಲನಚಿತ್ರ ನಟರು ಸೇರಿದಂತೆ ಗಣ್ಯಾತಿ ಗಣ್ಯರು ಬಂದು ಹರಸಿದರೆ ಮಾತ್ರ ವಿವಾಹ ಎಂಬ ಕಂದಾಚಾರಗಳನ್ನು ಬದಿಗೊತ್ತಿ ತಾಲೂಕಿನ ಅವಿನಾಶ್ ಮತ್ತು ಮಮತಾ ದಂಪತಿ 60ರ ದಶಕದಲ್ಲಿ ಹೊಸ ವಿಚಾರಧಾರೆಗಳಿಗೆ ದಾರಿ ಮಾಡಿ ಕೊಟ್ಟಿದ್ದ ರಾಷ್ಟ್ರಕವಿ ಕುವೆಂಪುರವರ ಕನಸಿನ ಮಂತ್ರ ಮಾಂಗಲ್ಯವೆಂಬ ಪದ್ಧತಿಯ ಮೂಲಕ ಸತಿಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಪರೂಪದ ವಿವಾಹಕ್ಕೆ ನಗರದ ಶ್ರೀ ಸಾಯಿಬಾಬಾ ಮಂದಿರ ಸಾಕ್ಷಿಯಾಗಿದೆ.
ಆಡಂಬರವಿಲ್ಲದೆ ಅಬ್ಬರದ ಪ್ರಚಾರವಿಲ್ಲದೆ ಸರಳವಾಗಿ ಕೇವಲ ಒಂದು ಗಂಟೆಯ ಅವಧಿಯಲ್ಲಿ ವಿವಾಹದ ವಿಧಿವಿಧಾನಗಳು ಪೂರ್ಣಗೊಂಡ ಈ ವಿವಾಹ ಕಾರ್ಯಕ್ರಮ ನಡೆದಿದ್ದು ಸಾರ್ವಜನಿಕರ ಗಮನ ಸೆಳೆದಿದೆ.
ಈ ಕಾರ್ಯಕ್ರಮದ ಮುಖ್ಯಸ್ಥಿಕೆ ವಹಿಸಿದ್ದ ಜೆ ಎಸ್ ಆನಂದ್ ಮಾತನಾಡಿ ರಾಷ್ಟ್ರಕವಿ ಕುವೆಂಪುರವರು 60ರ ದಶಕದಲ್ಲಿ ತಮ್ಮ ಪುತ್ರ ತೇಜಸ್ವಿಯವರ ವಿವಾಹ ಕಾರ್ಯಕ್ರಮ ಏರ್ಪಡಿಸುವಾಗ ಇಂತಹ ಮಂತ್ರ ಮಾಂಗಲ್ಯವೆಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದರು ಇಂದಿನ ಯುವ ಪೀಳಿಗೆ ಹಾಗೂ ಪೋಷಕರು ಆಡಂಬರದ ಮದುವೆಗಳಿಗೆ ಮಾರುಹೋಗುತ್ತಿದ್ದು ದುಂದು ವೆಚ್ಚಕ್ಕೆ ಕಾರಣವಾಗುತ್ತಿದೆ ಮನುಕುಲದ ಮನಸ್ಸುಗಳು ಬದಲಾವಣೆಯಾಗಿ ಇಂತಹ ಸರಳ ವಿವಾಹಗಳು ನಡೆದರೆ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನವ ವಿವಾಹಿತರಾದ ಅವಿನಾಶ್ ಹಾಗೂ ಮಮತಾ ಮಾತನಾಡಿ ಕುವೆಂಪುರವರ ಮಂತ್ರ ಮಾಂಗಲ್ಯ ಪದ್ಧತಿ ನಮ್ಮಿಬ್ಬರಿಗೂ ಇಷ್ಟವಾಗಿದ್ದರಿಂದ ಪೋಷಕರನ್ನು ಒಪ್ಪಿಸಿ ನಾವು ಇಂದು ಈ ವಿಧಾನದಲ್ಲಿ ವಿವಾಹವಾಗಿದ್ದೇವೆ ಆಡಂಬರದ ವಿವಾಹವಾಗುವುದರಿಂದ ಯಾವುದೇ ಲಾಭವಿಲ್ಲ ವಿವಾಹವೆಂಬುವುದು ಎರಡು ಮನಸ್ಸುಗಳ ನಡುವೆ ನಡೆಯಬೇಕು ಕುವೆಂಪುರವರ ಮಂತ್ರ ಮಾಂಗಲ್ಯದ ಅರ್ಥವನ್ನು ತಿಳಿದ ಮೇಲೆ ನಾವಿಬ್ಬರು ಈ ನಿರ್ಧಾರಕ್ಕೆ ಬಂದು ಇಂದು ವಿವಾಹ ಮಾಡಿಕೊಂಡಿದ್ದೇವೆ ವೇದಕಾಲದಲ್ಲಿನ ಉತ್ತಮ ಅಂಶಗಳನ್ನು ಸೇರಿಸಿ ಕುವೆಂಪುರವರ ಮಂತ್ರ ಮಾಂಗಲ್ಯ ರಚಿತವಾಗಿದೆ ಇಂತಹ ವಿವಾಹ ಕಾರ್ಯಗಳು ಇನ್ನು ಹೆಚ್ಚಿನ ರೀತಿಯಲ್ಲಿ ನಡೆಯಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಧುವರರ ಪೋಷಕರು ಹಾಗೂ ಆಪ್ತರು ಭಾಗವಹಿಸಿದ್ದರು.
0 Comments