ಚಳ್ಳಕೆರೆ: ತಾಲೂಕಿನ ದೈಹಿಕ ಶಿಕ್ಷಕರು ಹಾಗೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸಹ ಶಿಕ್ಷಕರು ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಗಳಲ್ಲಿ ಧ್ವಜಾರೋಹಣವನ್ನು ಅತ್ಯಂತ ನಿಷ್ಠೆ ಮತ್ತು ಪ್ರಜ್ಞಾಪೂರ್ವಕವಾಗಿ ನೆರವೇರಿಸಿ ರಾಷ್ಟ್ರ ಹಾಗೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ತಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ದೈಹಿಕ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ನಗರದ ವಿಶ್ವಭಾರತಿ ಪ್ರೌಢಶಾಲಾ ಆವರಣದಲ್ಲಿ ರಾಷ್ಟ್ರೀಯ ಸೇವಾದಳದ ವತಿಯಿಂದ ಹಮ್ಮಿಕೊಂಡಿದ್ದ ಅನುದಾನಿತ ಅನುದಾನ ರಹಿತ ಹಾಗೂ ಸರ್ಕಾರಿ ಶಾಲೆಗಳ ದೈಹಿಕ ಶಿಕ್ಷಕರು ಸಹ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಿಗೆ ದ್ವಜಾರೋಹಣದ ಸಿದ್ಧತೆಗಳ ಬಗೆಗಿನ ಕಾರ್ಯಗಾರವನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಭಾರತೀಯ ಆಚರಣೆಗಳಲ್ಲಿ ರಾಷ್ಟ್ರೀಯ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ ವರ್ಷದಲ್ಲಿ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಗಳ ಸಲುವಾಗಿ ಎರಡು ಬಾರಿ ಧ್ವಜಾರೋಹಣವನ್ನು ನೆರವೇರಿಸುತ್ತೇವೆ ಈ ಹೊಣೆಯನ್ನು ಶಿಕ್ಷಣ ಇಲಾಖೆ ಅತ್ಯಂತ ಜವಾಬ್ದಾರಿಯತವಾಗಿ ನೆರವೇರಿಸುತ್ತಾ ಬಂದಿದ್ದು ಪ್ರತಿ ವರ್ಷ ದೈಹಿಕ ಶಿಕ್ಷಕರಿಗೆ ಅನುಕೂಲದ ದೃಷ್ಟಿಯಿಂದ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಇಂತಹ ತರಬೇತಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಇರುವ ಸಂಶಯಗಳನ್ನು ನಿವಾರಿಸಿಕೊಂಡು ಧ್ವಜಾರೋಹಣ ಮಾಡಿದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಆದ್ದರಿಂದ ಎಲ್ಲಾ ಶಿಕ್ಷಕರು ಈ ತರಬೇತಿಯ ಪರಿಪೂರ್ಣ ಲಾಭವನ್ನು ಪಡೆದು ರಾಷ್ಟ್ರೀಯ ಹಬ್ಬಗಳಿಗೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಟಿಪಿಇಓ ಸುನೀಲ್ ನಾಯಕ್ ಮಾತನಾಡಿ ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜಾರೋಹಣ ನೆರವೇರಿಸುವ ಬಗ್ಗೆ ಪ್ರಾಯೋಗಿಕವಾಗಿ ದೈಹಿಕ ಶಿಕ್ಷಕರಿಗೆ ತಿಳಿಸಿಕೊಡಲಾಗುತ್ತಿದ್ದು ರಾಷ್ಟ್ರಧ್ವಜದ ಬಗ್ಗೆ ಮಾಹಿತಿ ಹಾಗೂ ರಾಷ್ಟ್ರಧ್ವಜವನ್ನು ಹಾರಿಸುವ ಮುನ್ನ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಬಿರದಲ್ಲಿ ತಿಳಿಸಿಕೊಡಲಿದ್ದು ಶಿಕ್ಷಕರು ಯಾವುದೇ ಸಂದೇಹಗಳಿದ್ದಲ್ಲಿ ಈ ಸಂದರ್ಭದಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ ಇಂತಹ ಕಾರ್ಯಕ್ರಮಗಳಿಂದ ದೈಹಿಕ ಶಿಕ್ಷಕರಿಗೆ ನೈತಿಕ ಸ್ಥೈರ್ಯ ಉಂಟಾಗಲಿದ್ದು ರಾಷ್ಟ್ರೀಯ ಹಬ್ಬಗಳಲ್ಲಿ ಆತ್ಮವಿಶ್ವಾಸದಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾದಳದ ಜಿಲ್ಲಾ ವಲಯ ಸಂಚಾಲಕ ಅಣ್ಣಯ್ಯ ಸೇವಾದಳದ ನಿರ್ದೇಶಕ ಆದರ್ಶ ದೊರೆ ತಿಪ್ಪೇಸ್ವಾಮಿ ವಿಶ್ವಭಾರತಿ ಶಾಲೆಯ ಮುಖ್ಯ ಶಿಕ್ಷಕ ವೀರಭದ್ರ ಸ್ವಾಮಿ, ಪ್ರಾಣೇಶ್ ಸುನಿಲ್ ನಾಯಕ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.
0 Comments