ಬೆಂಗಳೂರು :
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಹೋರಾಟ ಅಕ್ಟೋಬರ್ 30 ರಿಂದ ಪ್ರಾರಂಭಿಸಲಾಗಿದ್ದು, ಈ ಯೋಜನೆಯ ನಿರ್ದೇಶಕರು ಹೋರಾಟದ 2 ನೇ ದಿನ ಹೋರಾಟ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಹೋಗಿದ್ದು ಬಿಟ್ಟರೆ ಮತ್ತೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದಾಗಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀದೇವಿ ಹೇಳಿದರು.
ಬೆಂಗಳೂರಿನಲ್ಲಿ ರಾಜ್ಯದ ಶಿಕ್ಷಣಸಚಿವರಾದ ಮಧುಬಂಗಾರಪ್ಪನವರೊಂದಿಗೆ ಅಕ್ಷರದಾಸೋಹ ನೌಕರರ ಸಂಘಧ ಪದಾಧಿಕಾರಗಳು ಸಭೆ ನಡೆಸಿ, ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಮಾನ್ಯ ಸಚಿವರಿಗೆ ಈ ಬಗ್ಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಸರ್ಕಾರ ಫ್ರೀಡಂ ಪಾರ್ಕ್ ನಲ್ಲಿ ನಡೆದ ಬಿಸಿಯೂಟ ನೌಕರರ ಹೋರಾಟಕ್ಕೆ ಯಾವುದೇ ಗೌರವ ನೀಡದೇ ಇರುವ ಕ್ರಮವನ್ನು ಖಂಡಿಸಿ ಮತ್ತು ಈ ಕೂಡಲೇ ಸರ್ಕಾರ ಬಿಸಿಯೂಟ ನೌಕರರೊಂದಿಗೆ ಮಾತುಕತೆಗೆ ಮುಂದಾಗಬೇಕು ಇಲ್ಲವೇ, ರಾಜ್ಯಾದ್ಯಂತ ಬಿಸಿಯೂಟ ನೌಕರರು ನವೆಂಬರ್ 16ರಿಂದ ರಾಜ್ಯಾದ್ಯಂತ ಅಡುಗೆ ಬಂದ್ ಮಾಡಿ ಹೋರಾಟ ಮಾಡಲು ಸರ್ಕಾರಕ್ಕೆ ಮುಷ್ಕರ ನೋಟಿಸ್ ನೀಡಲಾಗಿತ್ತು,
ಈ ಮುಷ್ಕರ ನೋಟಿಸ್ ನೀಡಿದ ಹಲವು ಪ್ರಯತ್ನಗಳ ನಂತರ ನವಂಬರ್ 4ರಂದು ಆಯುಕ್ತರು ಮತ್ತು ನಿರ್ದೇಶಕರು ಸಂಘಟನೆಯ ಪದಾಧಿಕಾರಿಗಳ ಜೊತೆ ಜಂಟಿ ಸಭೆ ನಡೆಸಿ, ನಂತರ ನವೆಂಬರ್ 10 ರಂದು ಮಾನ್ಯ ಶಿಕ್ಷಣ ಸಚಿವರು ಅಧ್ಯಕ್ಷತೆಯಲ್ಲಿ ಸಂಘಟನೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆದು ಈ ಸಭೆಯಲ್ಲಿ ಬಿಸಿಯೂಟ ನೌಕರರ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ತೀರ್ಮಾನಿಸಲಾಯಿತು.
ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆದುಹಾಕುವ ಬಗ್ಗೆ ಚರ್ಚಿಸಲಾಗಿ ಸಿಬ್ಬಂದಿಯವರನ್ನು ಪಕ್ಕದ ಶಾಲೆಗೆ ತಾತ್ಕಾಲಿಕವಾಗಿ ನಿಯೋಜಿಸಲು ಆದೇಶಿಸಿದ್ದಾರೆ, ಅಡುಗೆ ಸಿಬ್ಬಂದಿಯ ಕೆಲಸದ ಅವಧಿ ನಾಲ್ಕು ಗಂಟೆಯಿಂದ ಆರು ಗಂಟೆಗಳೆಂದು ಪರಿಗಣಿಸಲು ಬಗ್ಗೆ ಚರ್ಚಿಸಲಾಗಿ ಈ ಕುರಿತು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
ಅಪಘಾತದಲ್ಲಿ ಮರಣ ಹೊಂದಿದ ಮತ್ತು ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಯ ಕುಟುಂಬದವರು ಅರ್ಜಿ ಸಲ್ಲಿಸಿದ್ದಲ್ಲಿ ಅಂತವರಿಗೆ ಕೆಲಸ ನೀಡಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತಲ್ಲದೆ, ಶಾಲೆಗಳಲ್ಲಿ ಬೆಂಕಿ ಅವಘಡಗಳಿಂದ ಯಾವುದೇ ಅಪಘಾತವಾದರೆ ಅದಕ್ಕೆ ಕಡ್ಡಾಯವಾಗಿ ಪರಿಹಾರ ನೀಡಲು ಆದೇಶಿಸಲಾಯಿತು.
ಉಳಿದ ಬೇಡಿಕೆಗಳು ಉಳಿದ ಬೇಡಿಕೆಗಳು ಸರ್ಕಾರ ತಾತ್ವಿಕವಾಗಿ ಒಪ್ಪಿದೆ ಆದರೆ ಹಣಕಾಸಿಗೆ ಸಂಬಂಧಿಸಿದ್ದರಿಂದ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದೇಶಗಳನ್ನು ಮಾಡಬೇಕಿರುವ ಹಿನ್ನೆಲೆಯಲ್ಲಿ ನವೆಂಬರ್ 15ರಂದು ಮಾನ್ಯ ಶಿಕ್ಷಣ ಸಚಿವರು ನವೆಂಬರ್ 16ರಿಂದ ನಡೆಯಬೇಕಿದ್ದ ನಮ್ಮ ಅನಿರ್ದಿಷ್ಟ ಹೋರಾಟವನ್ನು ವಾಪಸ್ಸು ಪಡೆಯಲು ವಿನಂತಿಸಿದರು.
ಆದ್ದರಿಂದ ಮಾನ್ಯ ಸಚಿವರು ಮಾಡಿಕೊಂಡ ವಿನಂತಿಯ ಮೇರೆಗೆ ಅವರ ವಿನಂತಿಗೆ ಗೌರವ ನೀಡಿ ನವೆಂಬರ್ 16ರಿಂದ ನಡೆಯಬೇಕಾದ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಸರ್ಕಾರ ಈಗಾಗಲೇ ಒಪ್ಪಿಕೊಂಡಂತೆ ಹಿಡಿಗಂಟು ಮತ್ತು ಸಾವಿರ ವೇತನ ಹೆಚ್ಚಳಕ್ಕೆ ಅಂದಾಜು 170 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಯಿತು.
ರಾಜ್ಯದ ಶಿಕ್ಷಣ ಸಚಿವರಾದ ಮಧುಬಂಗಾರಪ್ಪನವರು ಈ ಸಭೆಯಲ್ಲಿ ಒಪ್ಪಿಕೊಂಡಿರುವ ರೀತಿಯಲ್ಲಿ ನಮ್ಮ ಅಕ್ಷರದಾಸೋಹ ನೌಕರರ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂಬುದಾಗಿ ಈ ಸಂದರ್ಭದಲ್ಲಿ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀದೇವಿ ಕೊಪ್ಪಳ, ಕಾರ್ಯದರ್ಶಿ ಮಾಲಿನಿ ಬೆಂಗಳೂರು, ಗೌ.ಅಧ್ಯಕ್ಷೆ ವರಲಕ್ಷ್ಮೀ ಬೆಂಗಳೂರು, ಖಜಾಂಚಿ ಮಹದೇವಮ್ಮ, ಹಾಗೂ ರಾಜ್ಯ ಸಮಿತಿ ಪದಾಧಿಕಾರಿಗಳಾದ ಸಿದ್ಧಮ್ಮ ಬಾಗಲಕೋಟೆ, ನಿಂಗಮ್ಮ ಹಿರಿಯೂರು, ಮಹೇಶ್ ಕಾಮ್ರಾಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರಾಜ್ಯದ ಶಿಕ್ಷಣಸಚಿವ ಮಧುಬಂಗಾರಪ್ಪನವರೊಂದಿಗೆ ಅಕ್ಷರದಾಸೋಹ ನೌಕರರ ಸಂಘಧ ಪದಾಧಿಕಾರಗಳು ಸಭೆ ನಡೆಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments