ಹಿರಿಯೂರು :
ರಕ್ತದಾನ ಅತ್ಯಂತ ಶ್ರೇಷ್ಠದಾನ ಆದ್ದರಿಂದ ಇಂದಿನ ಯುವ ಪೀಳಿಗೆ ರಕ್ತದಾನ ಶಿಬಿರಗಳನ್ನು ಹೆಚ್ಚುಹೆಚ್ಚು ಹಮ್ಮಿಕೊಂಡು ಯುವ ಜನಾಂಗವನ್ನು ರಕ್ತದಾನ ಮಾಡಲು ಪ್ರೇರೇಪಿಸುವ ಮೂಲಕ ಮತ್ತೊಂದು ಜೀವ ಉಳಿಸಲು ಅವಕಾಶ ಕಲ್ಪಿಸಬೇಕು ಎಂಬುದಾಗಿ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರು ಹಾಗೂ ಯುವ ರೆಡ್ ಕ್ರಾಸ್ ನ ಮುಖ್ಯಸ್ಥರಾದ ಶಶಿಕಲಾ ರವಿಶಂಕರ್ ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನುಷ್ಯನ ಶರೀರದಲ್ಲಿ ದೊರಕುವ ನೈಸರ್ಗಿಕ ರಕ್ತವನ್ನು ಆ ಗುಣಮಟ್ಟಕ್ಕೆ ಯಾರೂ ತಯಾರು ಮಾಡಲು ಸಾಧ್ಯವಿಲ್ಲ, ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಎಂದರೆ ರಕ್ತಕ್ಕೆ ರಕ್ತವನ್ನು ಮರುಪೂರಣ ಮಾಡುವುದೊಂದೇ ಆಗಿದ್ದು, ಯುವಜನತೆ ರಕ್ತಹೀನತೆಯಿರುವವರಿಗೆ ಹಿಮೋಫಿಲಿಯಾ ಆದವರಿಗೆ ಕ್ಯಾನ್ಸರ್ ಪೀಡಿತರಿಗೆ ಶಸ್ರ್ತ ಚಿಕಿತ್ಸೆಗೊಳಗಾದವರಿಗೆ ಅಪಘಾತಕ್ಕೀಡಾದವರಿಗೆ ತುರ್ತು ಸಂದರ್ಭದಲ್ಲಿ ಅತ್ಯವಶ್ಯಕವಾಗಿ ರಕ್ತ ಬೇಕಾದಾಗ ಅತ್ಯಂತ ತುರ್ತಾಗಿ ರಕ್ತ ಪೂರೈಕೆ ಮಾಡಬೇಕು ಎಂದರು.
![](https://janadhwani.in/wp-content/uploads/2023/11/FB_IMG_1701354436491.jpg)
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ್ ಮಾತನಾಡಿ, ಆಸ್ಪತ್ರೆಗಳಲ್ಲಿ ಸರಿಯಾದ ರಕ್ತ ದೊರಕದೇ ರೋಗಿಗಳು, ಸಂಬಂಧಿಗಳು ಪರದಾಡುತ್ತಿದ್ದು, ಇಂದಿನ ಯುವಕರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು, ಸರಿಯಾದ ಸಮಯದಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಭಾಗಿಯಾಗಬೇಕು ಎಂಬುದಾಗಿ ಹೇಳಿದರು.
![](https://janadhwani.in/wp-content/uploads/2023/11/Picsart_23-11-30_23-01-33-231-1-scaled.jpg)
ಈ ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ್ ಘಟಕದ ಸಂಯೋಜನಾ ಅಧಿಕಾರಿಯಾದ ಡಾ.ನವೀನ್, ಹೆಚ್.ಎಸ್. ಕುಮಾರ್, ವಿ.ವೀರಣ್ಣ ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
0 Comments