ಮೂರು ದಿನಗಳ ಕೃಷಿ ಡ್ರೋನ್ ಪ್ರದರ್ಶನ ಯಶಸ್ವಿ

by | 18/11/23 | ಕೃಷಿ


ಬಳ್ಳಾರಿ,ನ.18
ಇಲ್ಲಿನ ಸಿರುಗುಪ್ಪ ರಸ್ತೆಯ ಲಕ್ಷ್ಮೀನಗರ ಕ್ಯಾಂಪ್ ಹತ್ತಿರದ ಐಸಿಎಆರ್ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆಯ ಸಂಶೋಧನಾ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ-ಡ್ರೋನ್ ಯೋಜನೆಯಡಿ ಐಸಿಅಆರ್-ಕೃಷಿ ತಂತ್ರಜ್ಞಾನ ಅಪ್ಲಿಕೇಶನ್ ಸಂಶೋಧನಾ ಸಂಸ್ಥೆ ಲೂಧಿಯಾ ಇವರ ವತಿಯಿಂದ ಸಂಶೋಧನಾ ಫಾರ್ಮ್‍ನ ಆವರಣದಲ್ಲಿ ನ.16ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಕೃಷಿ ಡ್ರೋನ್ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಐಸಿಎಆರ್ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆಯ ಸಂಶೋಧನಾ ಕೇಂದ್ರದ ಪ್ರಭಾರಿ ಮುಖ್ಯಸ್ಥ ಹಾಗೂ ಮಣ್ಣು ಮತ್ತು ಜಲ ಸಂರಕ್ಷಣೆಯ ಪ್ರಧಾನ ವಿಜ್ಞಾನಿ ಡಾ.ಬಿ.ಎಸ್.ನಾಯ್ಕ್ ಅವರು ಡ್ರೋನ್ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಮಹತ್ವದ ಕುರಿತು ರೈತರಿಗೆ ತಿಳಿಸಿದರು.
ಹಿರಿಯ ವಿಜ್ಞಾನಿ (ಅರಣ್ಯ) ಡಾ.ಎಂ.ಎನ್.ರಮೇಶ ಅವರು, ರೈತರಿಗೆ ಕೃಷಿ ಡ್ರೋನ್ ಪ್ರದರ್ಶನ ಕಾರ್ಯಕ್ರಮದ ವಿವರಗಳನ್ನು ನೀಡಿದರು.
ರಾಷ್ಟ್ರೀಯ ಬೀಜ ನಿಗಮದ ಸಹಾಯಕ ನಿರ್ದೇಶಕ ವಿನೋದ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ರೈತರಿಗೆ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಡ್ರೋನ್ ಒಂದು ಎಕರೆ ಪ್ರದೇಶದಲ್ಲಿ ರಾಸಾಯನಿಕಗಳನ್ನು ಸಿಂಪಡಿಸಲು 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು 12 ಲೀಟರ್ ದ್ರಾವಣವನ್ನು ಮಾತ್ರ ಬಳಸುತ್ತದೆ. ಇದು ಬೆಳೆಗಳಿಗೆ ರಾಸಾಯನಿಕಗಳನ್ನು ಸಿಂಪಡಿಸಲು ಅಗತ್ಯವಾದ ಕಾರ್ಮಿಕರನ್ನು ಹೆಚ್ಚು ಉಳಿಸುತ್ತದೆ ಎಂದು ತಂತ್ರಜ್ಞ ಅಭಿμÉೀಕ್ ಕುಮಾರ್ ಡ್ರೋನ್ ಪ್ರಾತ್ಯಕ್ಷಿಕೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಕೇಂದ್ರೀಕೃತ ರಾಸಾಯನಿಕಗಳನ್ನು ನಿಖರವಾಗಿ ಸಿಂಪಡಿಸಲು ಇದು ಬಹಳ ಸಹಕಾರಿಯಾಗಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು. ಅದೇ ರೀತಿಯಾಗಿ ಹೆಚ್ಚಿನ ಪ್ರದೇಶದಲ್ಲಿ ಡ್ರೋನ್ ಮೂಲಕ ಸಿಂಪಡಣೆಯ ಪ್ರಾತ್ಯಕ್ಷಿಕೆ ತೋರಿಸಬೇಕು ಎಂದು ರೈತರು ಒತ್ತಾಯಿಸಿದರು.
ಮೆಣಸಿನಕಾಯಿ ಬೆಳೆಗೆ ಬಾಡಿಗೆಗೆ ಡ್ರೋನ್ ಮೂಲಕ ರಾಸಾಯನಿಕಗಳನ್ನು ಸಿಂಪಡಿಸಲು ಪ್ರೇರೇಪಿತರಾಗಿದ್ದು, ಭಾಗವಹಿಸಿದ ಅನೇಕ ರೈತರು ಡ್ರೋನ್‍ನ ಬೆಲೆಯ ಮಾಹಿತಿ ಕೇಳಿದರು ಮತ್ತು ಅವರಲ್ಲಿ ಕೆಲವರು ಮುಂಬರುವ ಬೆಳೆ ಋತುವಿನಲ್ಲಿ ಡ್ರೋನ್ ಅನ್ನು ಖರೀದಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.
ಲಕ್ಷ್ಮೀನಗರ ಕ್ಯಾಂಪ್, ಕೋಳೂರು ಮತ್ತು ಸೋಮಸಮುದ್ರ ಗ್ರಾಮಗಳ ಸುಮಾರು 60ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 20 ಎಕರೆ ಮೆಣಸಿನಕಾಯಿ ಬೆಳೆಗೆ ಡ್ರೋನ್ ಮೂಲಕ ಸಸ್ಯ ಸಂರಕ್ಷಣಾ ಸಿಂಪಡಿಸಿ ಪ್ರಾತ್ಯಕ್ಷಿಕೆ ತೋರಿಸಲಾಯಿತು.
ಈ ಸಂದರ್ಭದಲ್ಲಿ ಉಸ್ತುವಾರಿ ಫಾರ್ಮ್ ಅಧೀಕ್ಷಕರು ಹಾಗೂ ತಂತ್ರಜ್ಞ ಗೌರವ್ ಭಾಟಿ, ತಂತ್ರಜ್ಞ ವೃಷಬೇಂದ್ರಪ್ಪ ಸೇರಿದಂತೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಹಾಗೂ ಮತ್ತಿತರರು ಹಾಜರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *