ಹಿರಿಯೂರು :
ಮನುಷ್ಯನಿಗೆ ಜೀವನದಲ್ಲಿ ಆರೋಗ್ಯ ಬಹಳ ಪ್ರಾಮುಖ್ಯವಾದದ್ದು, ಆದರೆ ನಾವು ನಮ್ಮ ಬದುಕಿನ ಒತ್ತಡದಲ್ಲಿ ಆರೋಗ್ಯದ ಕಡೆ ಗಮನ ನೀಡುವುದಿಲ್ಲ, ಅದರಲ್ಲೂ ಮಹಿಳೆಯರು ತಮ್ಮ ಮನೆ, ಮಕ್ಕಳು, ಕುಟುಂಬ ನೋಡಿಕೊಳ್ಳುವ ಭರದಲ್ಲಿ ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ, ಹೀಗಾಗದಂತೆ ಮಹಿಳೆಯರು ಇಂತಹ ಉಚಿತ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದಾಗಿ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಕಿರ್ಲೋಸ್ಕರ್ ಇಂಡಸ್ಟ್ರೀಸ್ ಲಿಮಿಟೆಡ್, ಭರವಸೆ ಚಾರಿಟಿಯಲ್ ಪೌಂಡೇಶನ್ಸ್, ಜಿಲ್ಲಾ ಆರೋಗ್ಯ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿಗಳು, ತಾಲ್ಲೂಕು ಕಾನೂನು ಸೇವಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಬೃಹತ್ ಆರೋಗ್ಯಮೇಳವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಕಿರ್ಲೋಸ್ಕರ್ ಸಮೂಹ ಸಂಸ್ಥೆಗಳು, ಬರೀ ತಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿ ಕಡೆಗೆ ಗಮನ ಹರಿಸದೆ ನಗರದ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ, ಮಹಿಳೆಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಕರೆಸಿ, ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ ಎಂದರಲ್ಲದೆ,
ಮುಂದಿನ ದಿನಗಳಲ್ಲಿ ಮಾರ್ಚ್ ತಿಂಗಳಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದಂದು ನಾವು ನಗರದಲ್ಲಿ ಸಹ ಬೃಹತ್ ಉಚಿತ ಆರೋಗ್ಯಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಆರೋಗ್ಯ ಶಿಬಿರಕ್ಕೂ ಕಿರ್ಲೋಸ್ಕರ್ ಕಂಪನಿಯವರು ಕೈಜೋಡಿಸಿ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂಬುದಾಗಿ ಮನವಿ ಮಾಡಿದರು.
ಖ್ಯಾತ ಮಹಿಳಾ ತಜ್ಞ ವೈದ್ಯೆ ಡಾ.ಪದ್ಮಿನಿ ಪ್ರಸಾದ್ ಮಾತನಾಡಿ, ಇಂದಿನ ದಿನಗಳಲ್ಲಿ ಪುರುಷರಿಗಿಂತ ಮಹಿಳೆಯರು ಮನೆ ಮಕ್ಕಳು, ಸಂಸಾರ ನಿರ್ವಹಣೆಯಲ್ಲಿ ಹೆಚ್ಚು ಒತ್ತಡದಿಂದ ಬಳಲುತ್ತಿದ್ದು, ಮುಟ್ಟಿನ ಸಮಸ್ಯೆ, ಗರ್ಭದಾರಣೆ ಸಮಸ್ಯೆ, ಋತುಬಂಧ, ದಾಂಪತ್ಯ ಸಮಸ್ಯೆ ಇರಬಹುದು, ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಈ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ತಜ್ಞ ವೈದ್ಯರ ಸಲಹೆ ಸೂಚನೆಗಳನ್ನು ಪಡೆದು ಆರೋಗ್ಯ ಸುಧಾರಿಸಿಕೊಳ್ಳುವ ಮೂಲಕ ಈ ಆರೋಗ್ಯ ಶಿಬಿರಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದರಲ್ಲದೆ,
ಯಾವುದೇ ಕಾಯಿಲೆಗಳಿಗೆ ಆರಂಭದಲ್ಲಿಯೇ ತೋರಿಸಿಕೊಂಡರೆ ಅಗತ್ಯ ಚಿಕಿತ್ಸೆ ಪಡೆದು ಕಾಯಿಲೆ ಗುಣಪಡಿಸಿಕೊಳ್ಳಬಹುದು, ಆದರೆ ತಡವಾಗಿ ತೋರಿಸಿಕೊಂಡರೆ, ಸ್ಟೇಜ್ ದಾಟಿ ವೈದ್ಯರ ಬಳಿ ಬಂದರೆ ಯಾರು ಗುಣಪಡಿಸಲು ಸಾಧ್ಯವಿಲ್ಲ, ಆದ್ದರಿಂದ ಮಹಿಳೆಯರು, ತಮ್ಮ ಸಮಸ್ಯೆಗಳ ಬಗ್ಗೆ ತಜ್ಞ ವೈದ್ಯರನ್ನು ಭೇಟಿ ಮಾಡಿ, ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ವಕೀಲರಾದ ಟಿ.ಸಂಜಯ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರಾದ ಶಿಲ್ಪಾಜಿ.ತಿಮ್ಮಾಪುರ, ವಕೀಲರಾದ ಮೀನಾಕ್ಷಿ, ಕಿರ್ಲೋಸ್ಕರ್ ಕಂಪನಿಯ ಪಿ.ನಾರಾಯಣ, ಕೆ.ಚಂದ್ರಶೇಖರಾಚಾರಿ, ಹರೀಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಕಾಂತರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments