ಹಿರಿಯೂರು :
ಮನುಷ್ಯನ ಮನಸ್ಸಿನ ಮೇಲೆ ನೂರು ಭಾಷಣಗಳು ಬೀರದ ಪ್ರಭಾವವನ್ನು ಒಂದು ಹಾಡು ಬೀರಬಲ್ಲದು, ಜನಸಾಮಾನ್ಯರ ನೋವು ಹಾಡಿನ ಧ್ವನಿಯಾಗಿ ಹೊರಹೊಮ್ಮಿದರೆ ಕೋಟಿ ಕೋಟಿ ಬಾಂಬ್ ಗಳಿಗಿಂತ ತೀಕ್ಷ್ಣದಾದ ಅದರ ತೀವ್ರತೆಯನ್ನು ತಡೆಯಲು ಅಸಾಧ್ಯ ಎಂಬುದಾಗಿ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಜಿಲ್ಲಾಡಳಿತ ಹಾಗೂ ಮದಕರಿಯ ಯುವಕ ಸಂಘ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಡಿನಾಡ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಸಮಾಜವು ನಿರಂಕುಶ ಆಡಳಿತದಲ್ಲಿದ್ದಾಗ ಮತ್ತು ಸಾಂಪ್ರದಾಯಿಕ ಮಾಧ್ಯಮಗಳು ಜನರು ತಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಜನ ಜಾಗೃತಿಗೊಳಿಸುವಲ್ಲಿ ತನ್ನ ಪಾತ್ರವನ್ನು ವಹಿಸಲು ವಿಫಲವಾದಾಗ ಅದು ಸಮುದಾಯಗಳನ್ನು ಭರವಸೆಯ ಪರ್ಯಾಯ ಮೂಲಗಳನ್ನು ನೋಡುವಂತೆ ಒತ್ತಾಯಿಸುತ್ತದೆ ಎಂದರಲ್ಲದೆ,
ಇಂದು ಅದು ಸಾಮಾಜಿಕವಾಗಿರಬಹುದು, ಆದರೆ ಹಿಂದಿನ ಯುಗದಲ್ಲಿ ಜನರ ಜೀವನವನ್ನು ವೃದ್ಧಿಸಿದ ಜಾನಪದ ಹಾಡುಗಳು ಮತ್ತು ಜಾನಪದ ಸಾಹಿತ್ಯದ ಪರ್ಯಾಯ ಮಾಧ್ಯಮವಾಗಿದೆ, ಮನುಷ್ಯ ತನ್ನ ಹಾಡುಗಳಿಂದ ನೂರಾರು ಸಾವಿರ ಜನರನ್ನು ಪ್ರೇರೇಪಿಸಿದನು. ಅದು ಸರಳವಾದ ಶಕ್ತಿಯುತ ನೀತಿಬೋಧಕ ಮತ್ತು ಪ್ರಚೋದಿಸುವಂತಿತ್ತು, ಜನಮಾನಸದ ನೋವನ್ನು ಹಾಡಿನ ಮೂಲಕ ಪ್ರಭುತ್ವಕ್ಕೆ ಸವಾಲು ಹಾಕುವಲ್ಲಿ ಗದ್ದರ್ ಅವರು ಈ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿದ್ದನ್ನು ಈ ಸಮಯದಲ್ಲಿ ನೆನೆಯಬಹುದು ಎಂಬುದಾಗಿ ಹೇಳಿದರು.
ವಾಣಿ ಕಾಲೇಜಿನ ಪ್ರಾಚಾರ್ಯರಾದ ಡಾ. ಆರ್.ಮಹೇಶ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಮುಂತಾದ ಮಹಾನ್ ನಾಯಕರ ಚಿಂತನೆಗಳು ಇಡೀ ಮನುಕುಲಕ್ಕೆ ಅವಶ್ಯಕ ಅಲ್ಲದೆ ಪ್ರಸ್ತುತ ನೆಮ್ಮದಿಯ ಬದುಕಿಗೆ ದಾರಿದೀಪವಾಗಿವೆ, ಆನಂತರ ಅಂಥವರ ವೈಚಾರಿಕ ಚಿಂತನೆ ಹಾಗೂ ಸಂದೇಶಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಅವಶ್ಯಕವಾಗಿದೆ ಎಂಬುದಾಗಿ ಹೇಳಿದರು.
ಸಹಾಯಕ ಪ್ರಾಧ್ಯಾಪಕರಾದ ಡಾ.ಧರಣೇಂದ್ರಯ್ಯ ಮಾತನಾಡಿ, ಮುಂದಿನ ಜಾಗತೀಕರಣದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಲಾವಿದರ ಸೇವೆ ಅನನ್ಯ ಕಲಾವಿದರ ಬದುಕಿಗೆ ಸರಕಾರಗಳು ಕೈಜೋಡಿಸಬೇಕು ಎಂಬುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ವಯೋಲಿನ್ ವಾದನ ಡಾ.ಟಿ.ಭವ್ಯರಾಣಿ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯನ ಸುಜಿತ, ಗೊರವರ ಕುಣಿತ ಶಿವಣ್ಣ, ಸುಗಮ ಸಂಗೀತ ಗಾಯನ ಕೆ.ಗಂಗಾಧರ್, ವಚನ ಸಂಗೀತ ಎಸ್.ಮೈಲಾರಿ ತುರುವನೂರು, ಜನಪದ ಸಂಗೀತ ಹಿಮಂತರಾಜ, ದಾಸರಪದ ಅಂಜಿನಪ್ಪ, ತತ್ವಪದ ಮುಂತಾದ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೆ.ರಂಗಪ್ಪ ವಹಿಸಿದ್ದರು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಾಂತಮ್ಮತಿಪ್ಪೇಸ್ವಾಮಿ, ಮದಕರಿ ಯುವಕ ಸಂಘದ ಅಧ್ಯಕ್ಷ ಕೆ.ಸೋಮಶೇಖರ್, ಮುಖಂಡರಾದ ಹುಚ್ಚವ್ವನಹಳ್ಳಿ ವೆಂಕಟೇಶ್, ತುರುವನೂರು ಜಗನ್ನಾಥ್, ಪೋಷಕ ಪ್ರತಿನಿಧಿಗಳಾದ ಟಿಬಿಸರ್ಕಲ್ ಕರಿಯಮ್ಮ, ಮಂಜುಳಾ, ಶಾಲೆಯ ಮುಖ್ಯ ಶಿಕ್ಷಕಿ ಎಂ.ದೀಪ, ವಿದ್ಯಾಯಾದವ್, ರಾಜೇಶ್ವರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments