ಬಳ್ಳಾರಿ,ನ.02
ಮಗುವಿನ ಬಾಲ್ಯದಲ್ಲಿ ಕಾಡುವ 12 ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸದೆ ಮಗುವಿಗೆ ಹಾಕಿಸುವ ಮೂಲಕ ಮಗುವಿನ ಸದೃಡ ಆರೋಗ್ಯಕ್ಕಾಗಿ ಪಾಲಕರು ಕೈಜೋಡಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ತಿಳಿಸಿದರು.
ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪರಿಶೀಲಿಸಿ ತಾಯಂದಿರಿಗೆ ಜಾಗೃತಿಗಾಗಿ ಹಮ್ಮಿಕೊಂಡ ಗ್ರಾಮ ಆರೋಗ್ಯ ಮತ್ತು ಪೌಷ್ಟಿಕ ಆಹಾರ ನೈರ್ಮಲ್ಯ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಗು ಜನಿಸಿದ ಅರ್ಧ ಗಂಟೆ ಒಳಗೆ ತಾಯಿಯ ಎದೆ ಹಾಲು ಉಣಿಸಿ ಹಾಗೂ ಮುಂದಿನ ಆರು ತಿಂಗಳವರೆಗೆ ಕೇವಲ ತಾಯಿ ಎದೆಹಾಲನ್ನು ಮಾತ್ರ ನೀಡುವ ಮೂಲಕ ಮಗುವಿಗೆ ಯಾವುದೇ ಸೋಂಕು ಬರದಂತೆ ಹಾಗೂ ತಾಯಿಯ ಬಾಂಧವ್ಯ ಬೆಸಿಗೆಯಾಗಲಿರುವ ಅವಕಾಶವನ್ನು ಯಾರು ಕಳೆದುಕೊಳ್ಳಬಾರದು ಎಂದು ತಿಳಿಸಿದರು.
ಆರು ತಿಂಗಳ ನಂತರ ಮನೆ ಮಟ್ಟದಲ್ಲಿಯೇ ದೊರಕುವ ಪೌಷ್ಟಿಕ ಅಂಶವುಳ್ಳ ಕಾಳುಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸಿದ್ದಪಡಿಸಿ ದ್ರವರೂಪದಲ್ಲಿ ಪೂರಕ ಪೌಷ್ಟಿಕ ಆಹಾರವನ್ನು ನೀಡುವ ಮೂಲಕ ಮಗುವಿಗೆ ಸದೃಢ ಆರೋಗ್ಯಕ್ಕೆ ಕುಟುಂಬದ ಸದಸ್ಯರು ಬೆಂಬಲವಾಗಿ ನಿಲ್ಲಬೇಕೆಂದು ಎಂದು ಹೇಳಿದರು.
ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸ್ಥಳೀಯವಾಗಿ ದೊರಕುವ ಹಸಿರು ತಪ್ಪಲು ಪಲ್ಯಗಳನ್ನು, ಕಾಳುಗಳನ್ನು ಮೊಳಕೆ ಬರೆಸಿ ಕೊಡುವ ಮೂಲಕ ಮತ್ತು ಆಹಾರದಲ್ಲಿ ಬೆಲ್ಲದ ಅಂಶವುಳ್ಳ ಪದಾರ್ಥ ಹಾಗೂ ಸ್ಥಳೀಯವಾಗಿ ದೊರಕುವ ಪಾಲಕ್ ಮೆಂತ್ಯೆ, ನುಗ್ಗೆ ಪುಂಡಿ ಪಲ್ಯ ಇತರ ಹಸಿರು ತಪ್ಪಲು ಪದಾರ್ಥಗಳನ್ನು ಮತ್ತು ಸ್ಥಳೀಯವಾಗಿ ದೊರಕುವ ಹಣ್ಣುಗಳನ್ನು ಕೊಡುವ ಮೂಲಕ ರಕ್ತದಲ್ಲಿ ಕಬ್ಬಿಣಾಂಶ ಕಡಿಮೆಯಾಗದಂತೆ ನೋಡಿಕೊಳ್ಳುವದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಚಿಂತಿಸುವ ಪ್ರಮೇಯ ಬರುವುದಿಲ್ಲ, ಅಲ್ಲದೆ ಮೂಢನಂಬಿಕೆಗಳು ಮತ್ತು ನಮ್ಮ ರೂಡಿಗತವಾದ ಸಂಪ್ರದಾಯಗಳಿಗೂ ಮಗುವಿಗೆ ಹಾಕುವ ಲಸಿಕೆಗಳಿಗೆ ಅಡ್ಡಿಯಾಗದಂತೆ ದಯವಿಟ್ಟು ಲಸಿಕೆಗಳನ್ನು ಹಾಕಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಕರಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಶರಣಬಸವ, ವೀರೇಶ್, ಸಮುದಾಯ ಆರೋಗ್ಯ ಅಧಿಕಾರಿ ಭರತ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಂಕ್ರಮ್ಮ ಆಶಾ ಸುಗಮಕಾರರು ಪರಿಮಳ ಸೇರಿದಂತೆ ಗ್ರಾಮದ ಆಶಾ, ಅಂಗನವಾಡಿ ಕಾರ್ಯಕರ್ತೆರು ಹಾಗೂ ತಾಯಂದಿರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments