ಚಳ್ಳಕೆರೆ:ತಾಲೂಕಿನ ಕ ಸ ಬ ಹೋಬಳಿಯ ಭರಮಸಾಗರ ಲಂಬಾಣಿ ತಾಂಡಾದಲ್ಲಿ ಯುವತಿಯರು ಸಾಂಪ್ರದಾಯಿಕ ಹೊಸ ಉಡುಪು ತೊಟ್ಟು, ಕೈಯಲ್ಲಿ ದೀಪ ಹಿಡಿದು ಮನೆ ಮನೆಗೆ ತೆರಳಿ, ನೃತ್ಯ ಮಾಡಿ ದೀಪಾವಳಿ ಹಬ್ಬವನ್ನ ಸಂಭ್ರಮಿಸಿದರು.
ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಕಳೆಗಟ್ಟಿದೆ. ಬಂಜಾರ ಜನಾಂಗದ ದೀಪಾವಳಿ ಹಬ್ಬ ‘ಮೇರಾ’ ಸಂಭ್ರಮವಂತೂ ಕಣ್ಮನ ಸೆಳೆಯುತ್ತಿದೆ ಬಂಜಾರ ಜನಾಂಗವು ಅನಾದಿ ಕಾಲದಿಂದಲೂ ತಮ್ಮದೇ ಆದ ವಿಶಿಷ್ಟ ಮತ್ತು ವಿನೂತನ ರೀತಿಯಲ್ಲಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದು, ನೋಡುಗರಲ್ಲಿ ಖುಷಿ ಮೂಡಿಸುತ್ತದೆ.
ಬಂಜಾರ ಜನಾಂಗಕ್ಕೆ ದೀಪಾವಳಿ ಹಬ್ಬ ಬಹಳ ವಿಶೇಷ. ತಾಂಡಾಗಳಲ್ಲಿ ದೀಪಾವಳಿಯ ‘ಮೇರಾ’ ಸಂಭ್ರಮ ನೋಡುವುದೇ ಕಣ್ಣಿಗೆ ಹಬ್ಬ. ತಾಂಡಾಗಳಲ್ಲಿ ಅಮಾವಾಸ್ಯೆ ದಿನದಿಂದ ದೀಪಾವಳಿ ಆಚರಣೆ ಪ್ರಾರಂಭವಾಗುತ್ತದೆ.
ಭರಮಸಾಗರ ತಾಂಡಾದಲ್ಲಿ ಸಂಭ್ರಮದಿಂದ ದೀಪಾವಳಿ ಆಚರಣೆ ಮಾಡಲಾಯಿತು. ತಾಂಡಾದ ಯುವತಿಯರು ಸಾಂಪ್ರದಾಯಿಕ ಹೊಸ ಉಡುಪು ತೊಟ್ಟು ಸೇವಾಲಾಲ ಮರಿಯಮ್ಮ ದೇವಿಯ ಮಂದಿರಕ್ಕೆ ಆಗಮಿಸಿ, ದೇವರಿಗೆ ದೀಪ ಬೆಳಗಿಸಿದರು. ನಂತರ ಸಾಮೂಹಿಕವಾಗಿ ಸಾಂಪ್ರದಾಯಿಕ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.
ಜೀವನದಲ್ಲಿ ಎದುರಾದ ದುಃಖ ದುಮ್ಮಾನಗಳು ಕಳೆದು ಕತ್ತಲೆಯಿಂದ ಬೆಳಕಿನಡೆಗೆ ಜೀವನ ಸಾಗಲಿ ಎನ್ನುವುದೇ ಮೇರಾ ಹಬ್ಬದ ಅರ್ಥ. ಬಂಜಾರ ಜನಾಂಗ ಇದನ್ನು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದೆ.
ಭರಮಸಾಗರ ತಾಂಡಾ ಹಾಗೂ ತಾಲೂಕಿನ ಇತರ ತಾಂಡಾಗಳಲ್ಲಿ ಚಾಚು ತಪ್ಪದೇ ಅನಾದಿ ಕಾಲದ ಮಾದರಿಯಲ್ಲೇ ಆಚರಣೆಗಳನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ.
ದೀಪಾವಳಿ ಅಮಾವಾಸ್ಯೆ ದಿನ ಕಾಳಿಮಾಸ್ ದಿನ ಎಂದು ರಾತ್ರಿಯಿಂದ ಬೆಳಗಿನವರೆಗೆ ತಾಂಡಾದ ಮದುವೆಯಾಗದ ಕನ್ಯಾಮಣಿಯರು ಹೊಸ ಸಾಂಪ್ರದಾಯಿಕ ಉಡುಪು ತೊಟ್ಟು, ಕೈಯಲ್ಲಿ ಹಣತೆ ಹಿಡಿದು ತಾಂಡಾದ ಮನೆಗಳಿಗೆ ತೆರಳಿ ದೀಪ ಬೆಳಗಿಸುವುದು ರೂಢಿಯಲ್ಲಿದೆ. ಮದುವೆ ನಿಶ್ಚಯವಾದ ಯುವತಿಯರು ಅರಣಿಯಲ್ಲಿ ಹುಲ್ಲಿನಿಂದ ತಯಾರಿಸಿದ ಹಣತೆಯನ್ನು ಇಟ್ಟುಕೊಂಡು ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಆಕಳು, ಎತ್ತುಗಳಿಗೆ ಆರತಿ ಬೆಳಗಿಸಿ, ಮನೆಯವರಿಗೆ ಅಕ್ಕಿ ಹಿಟ್ಟು, ಬೆಲ್ಲ ಹಾಗೂ ನೀರು ಅರ್ಪಿಸುತ್ತಾರೆ
ಇದರೊಂದಿಗೆ ನಾನು ಗಂಡನ ಮನೆಗೆ ಹೋಗುತ್ತಿದ್ದೇನೆ. ನನಗೂ ತಾಂಡಾಕ್ಕೂ ಋಣ ತೀರಿದೆ. ನನ್ನ ಹೆತ್ತವರು ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸಾಂಪ್ರದಾಯಿಕ ಹಾಡಿನ ಮೂಲಕ ಹೇಳಿ ಹೋಗುತ್ತಾರೆ.
ದೀಪಾವಳಿ ಆರಂಭದಿಂದ ಮುಗಿಯುವ ವರೆಗೆ ಬಂಜಾರ ಸಮುದಾಯದವರು ಮನೆಯಿಂದ ದನಕರುಗಳ ಸಗಣಿಯನ್ನು ಹೊರಗೆ ಚೆಲ್ಲುವುದಿಲ್ಲ. ಇದರಲ್ಲಿ ಲಕ್ಷ್ಮಿ ಇರುತ್ತಾಳೆ ಎಂಬ ನಂಬಿಕೆ ಅವರಲ್ಲಿದೆ. ಒಟ್ಟಾರೆ, ಬಂಜಾರ ಜನಾಂಗಕ್ಕೆ ದೀಪಾವಳಿ ಅತಿದೊಡ್ಡ ಹಬ್ಬವಾಗಿದ್ದು, ಹತ್ತು ಹಲವು ವಿಶಿಷ್ಟತೆಯೊಂದಿಗೆ ಹಬ್ಬ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ರಂಗಸ್ವಾಮಿ ಹಬ್ಬಕ್ಕೆ ಬರುವುದು ಕಡ್ಡಾಯ ಉದ್ಯೋಗ ಅರಸಿ ಬೆಂಗಳೂರು ಮತ್ತು ನಗರಗಳಿಗೆ ಹೋದವರು ಕಾಫಿ ತೋಟ ಇತರ ಕೆಲಸಕ್ಕೆ ಎಂದು ಬೇರೆ ಕಡೆ ತೆರಳಿದ ಕಾರ್ಮಿಕರು ಸರ್ಕಾರಿ ಕೆಲಸದಲ್ಲಿರುವ ನೌಕರರು ದೀಪಾವಳಿಗೆ ತಮ್ಮ ಹುಟ್ಟೂರಿಗೆ ಬರುವುದು ಕಡ್ಡಾಯ ತಾಂಡಗಳಲ್ಲಿ ಎಲ್ಲಾ ಹಬ್ಬಗಳಿಗಿಂತ ದೀಪಾವಳಿಯನ್ನು ಹೆಚ್ಚು ಸಡಗರದಿಂದ ಆಚರಿಸಲಾಗುವುದರಿಂದ ಎಲ್ಲರೂ ಸೇರುತ್ತಾರೆ ಪೂರ್ವಜರ ಕಟ್ಟುಪಾಡುಗಳನ್ನು ಇಂದಿಗೂ ಉಳಿಸಿಕೊಂಡಿದ್ದು ಪ್ರತಿ ಮನೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್. ರವಿ ನಾಯ್ಕ್ ಜಿ.ದೇಶ ನಾಯ್ಕ್ .ಹೇಮಾ ನಾಯ್ಕ್. ಗೌರಿ ಬಾಯಿ. ಸೊಮ್ಲಿ ಬಾಯಿ. ಸಾಲಿ ಬಾಯಿ.ಜಯ ಬಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments