ಹಿರಿಯೂರು :
ಬಹುಗ್ರಾಮ ಕುಡಿವ ನೀರಿನ ಯೋಜನೆ ಬಾಕಿ ಇರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಜೆ.ಜಿ.ಹಳ್ಳಿ-ಐಮಂಗಲ ಹೋಬಳಿಯ ಎಲ್ಲ ಹಳ್ಳಿಗಳಿಗೂ ಶುದ್ದ ಕುಡಿವ ನೀರು ಪೂರೈಕೆ ಮಾಡಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಪ್ರವಾಸಿಮಂದಿರ ಸಭಾಂಗಣದ ಆವರಣದಲ್ಲಿ ಸೋಮವಾರದಂದು ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.
ತಾಲ್ಲೂಕಿನ ಜೆ.ಜಿ.ಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕುಡಿವ ನೀರಿಗಾಗಿ ಹಾಹಾಕಾರ ಎದುರಾಗಿದ್ದು, ಅಗತ್ಯವಿರುವೆಡೆ ತುರ್ತು ಕೊಳವೆಬಾವಿ ಕೊರೆಯಿಸಿ, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದರು.
ಜೆ.ಜಿ.ಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗಾಯತ್ರಿ ಜಲಾಶಯ ಇದ್ದರೂ ಕುಡಿವ ನೀರಿನ ಹಾಹಾಕಾರ ಎದುರಾಗಿರುವುದು, ಸಮುದ್ರಕ್ಕೆ ನೆಂಟಸ್ಥನ, ಉಪ್ಪಿಗೆ ಬರ ಎನ್ನುವಂತಾಗಿದೆ ಎಂಬುದಾಗಿ ಸಚಿವರಾದ ಡಿ.ಸುಧಾಕರ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಜೆ.ಜಿ.ಹಳ್ಳಿ ಹೋಬಳಿಯ 38 ಹಳ್ಳಿಗಳಿಗೆ ಕುಡಿವ ನೀರಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ, ತಾಂತ್ರಿಕ ಸಮಸ್ಯೆಯಿಂದ 9 ಗ್ರಾಮದ ಕಾಮಗಾರಿ ಬಾಕಿ ಇದೆ ಎಂಬ ಮಾಹಿತಿಯನ್ನು ಎಇಇ ಅಸ್ಲಾಂ ಬಾಷಾ ಸಭೆಯ ಗಮನಕ್ಕೆ ತಂದರು.
ತಾಲೂಕಿನಲ್ಲಿ 201 ಶುದ್ಧ ಕುಡಿವ ನೀರಿನ ಘಟಕಗಳಿದ್ದು, ಇವುಗಳ ನಿರ್ವಹಣೆ ಜವಾಬ್ದಾರಿ ಗ್ರಾಮ ಪಂಚಾಯಿತಿಗೆ ವಹಿಸಿದರೆ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವುದು ಎಂಬುದಾಗಿ ತಾಲ್ಲೂಕು ಪಂಚಾಯಿತಿ ಇಒ ಸತೀಶ್ ಕುಮಾರ್ ಸಭೆಯಲ್ಲಿ ಮನವಿ ಮಾಡಿದರು.
ಸಭೆಗೆ ತಡವಾಗಿ ಆಗಮಿಸಿದ ಅಬಕಾರಿ ಡಿವೈಎಸ್.ಪಿ ಭಾರತಿ ಮೇಲೆ ಗರಂ ಆದ ಸಚಿವರು, ಕೆಡಿಪಿ ಸಭೆ ಬಗ್ಗೆ ನಿಮಗೆ ಮಾಹಿತಿ ನೀಡಿದ್ದರೂ ಸಕಾಲಕ್ಕೆ ಏಕೆ ಸಭೆಗೆ ಬಂದಿಲ್ಲ, ನಿಮ್ಮನ್ನು ಸಸ್ಪೆಂಡ್ ಮಾಡುವಂತೆ ಡಿಸಿಗೆ ಪತ್ರ ಬರೆಯಲಾಗುವುದು ಎಂದರಲ್ಲದೆ,
ಪ್ರಗತಿ ಪರಿಶೀಲನಾ ಸಭೆ ಕುರಿತು ಗೌರವ ಇಲ್ಲದ ನೀವು ತಾಲೂಕಿನಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ, ನಾಳೆಯಿಂದ ಕಡ್ಡಾಯ ರಜೆ ಮೇಲೆ ಹೋಗಿ ಎಂದರಲ್ಲದೆ, ಈ ಕೂಡಲೇ ಸಭೆಯಿಂದ ತೆರಳುವಂತೆ ಸಚಿವರು ತಾಕೀತು ಮಾಡಿದರು. ಬಾಗಿಲಲ್ಲಿಯೇ ನಿಂತುಕೊಂಡಿದ್ದ ಅಧಿಕಾರಿ, ಬಳಿಕ ಸಭೆಯಲ್ಲಿ ಕುಳಿತುಕೊಂಡರು.
ಸಭೆಗೆ ಗೈರು ಹಾಜರಾದ ಅರಣ್ಯ, ಅಬಕಾರಿ, ಮೀನುಗಾರಿಕೆ ಇತರ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದರಲ್ಲದೆ, ತಾಲೂಕಿನ ಹಾಸ್ಪೆಲ್ ಗಳಲ್ಲಿ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಬೇಕು, ಕೆಲವಡೆ ಮಕ್ಕಳು ಹಾಸ್ಟೆಲ್ ನಲ್ಲಿ ಇರುವುದಿಲ್ಲ ಎಂಬ ದೂರು ಕೇಳಿಬಂದಿದೆ. ಈ ಕುರಿತು ನಿಗಾ ವಹಿಸಬೇಕು ಎಂಬುದಾಗಿ ಸಚಿವರು ಸೂಚಿಸಿದರು.
ಈ ಸಭೆಯಲ್ಲಿ ತಾಲ್ಲೂಕು ತಹಶೀಲ್ದಾರ್ ರಾಜೇಶ್ ಕುಮಾರ್, ಬೆಸ್ಕಾಂ ಎಇಇ ಪೀರ್ ಸಾಬ್, ಬಿಇಒ ಸಿ.ಎಂ.ತಿಪ್ಪೇಸ್ವಾಮಿ, ಕೆಡಿಪಿ ಸದಸ್ಯ ಗುರುಪ್ರಸಾದ್, ಶ್ರೀಧರ್, ಅಯೂಬ್ ಖಾನ್, ಮಮತಾ, ನಗರಸಭೆ ಪೌರಾಯುಕ್ತರಾದ ಎಚ್.ಮಹಂತೇಶ್, ಟಿಎಚ್ಒ ಡಾ.ವೆಂಕಟೇಶ್, ತೋಟಗಾರಿಕೆ ಇಲಾಖೆ ಅಧಿಕಾರಿ ಲೋಕೇಶ್ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments