ಹಿರಿಯೂರು :
ನಗರದ ನಗರಸಭೆ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನೂತನವಾಗಿ ವಿವಿಧ ಬಣ್ಣಬಣ್ಣದ ಚಿತ್ತಾರಗಳಿಂದ ಅತ್ಯಂತ ಆಕರ್ಷಕವಾಗಿ ಸಿಂಗಾರಗೊಂಡಿರುವ ನಗರದ ಸಾರ್ವಜನಿಕ ಶೌಚಾಲಯಗಳನ್ನು ಹಿರಿಯಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಯುತ ಎಂ.ವಿಜಯ್ ರವರು ವೀಕ್ಷಣೆ ಮಾಡಿ, ನಗರಸಭೆ ಕಾರ್ಯವೈಖರಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಸಾರ್ವಜನಿಕ ಶೌಚಾಲಯಗಳನ್ನು ನಗರಸಭೆ ವತಿಯಿಂದ ಬಣ್ಣಬಣ್ಣದ ಚಿತ್ತಾರಗಳಿಂದ ಸಿಂಗಾರಗೊಳಿಸುವ ಮೂಲಕ ಅತ್ಯಂತ ಆಕರ್ಷಣೀಯವಾಗಿ ನಿರ್ಮಾಣಮಾಡಿದ್ದೀರಿ, ಆದರೆ ಈ ಶೌಚಾಲಯಗಳನ್ನು ಸಾರ್ವಜನಿಕರು ಬಳಸಿದ ನಂತರವೂ ಯಾವುದೇ ರೀತಿಯಲ್ಲಿ ಹಾಳಾಗದಂತೆ ಹಾಗೂ ಕೊಳಕಾಗದಂತೆ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಕೆಲಸವಾಗಿದೆ ಎಂದರಲ್ಲದೆ,
ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಶೌಚಾಲಯಗಳನ್ನು ಬಣ್ಣಬಣ್ಣದ ಚಿತ್ರಗಳಿಂದ ಚಿತ್ತಾರಗಳಿಂದ ಸಿಂಗಾರಗೊಳಿಸಿರುವ ನಗರಸಭೆ ಪೌರಾಯುಕ್ತರಾದ ಹೆಚ್.ಮಹಂತೇಶ್ ರವರ ಸೃಜನಶೀಲತೆ, ಕ್ರೀಯಾಶೀಲತೆ, ಹಾಗೂ ಅವರ ಕಾರ್ಯವೈಖರಿ, ಅತ್ಯಂತ ಪ್ರಶಂಸನೀಯ, ಈ ಕಾರ್ಯದಲ್ಲಿ ಅವರ ಜೊತೆ ಕೈಜೋಡಿಸಿರುವ ನಗರಸಭೆಯ ಎಲ್ಲಾ ನೌಕರರು, ಸಿಬ್ಬಂದಿವರ್ಗ ಅಭಿನಂದಾನಾರ್ಹರು ಎಂಬುದಾಗಿ ಹೇಳಿದರು.
ಈ ಕುರಿತು ನ್ಯಾಯಾಧೀಶರಿಗೆ ಮಾಹಿತಿ ನೀಡಿದ ಪೌರಾಯುಕ್ತರಾದ ಮಹಂತೇಶ್ ರವರು ನಗರದಲ್ಲಿ ಸುಮಾರು 6 ಬೃಹತ್ ಸಾರ್ವಜನಿಕ ಶೌಚಾಲಯಗಳಿದ್ದು, ಅದರಲ್ಲಿ ಈಗ ಪ್ರಾಯೋಗಿಕವಾಗಿ ಮೊದಲು ಈ ಖಾಸಗಿ ಬಸ್ ನಿಲ್ದಾಣದ ಶೌಚಾಲಯವನ್ನು ಆಯ್ಕೆ ಮಾಡಿಕೊಂಡು ಸ್ವಚ್ಛಗೊಳಿಸಿ, ವಿವಿಧ ಕಲಾಕೃತಿಗಳಿಂದ ಸಿಂಗಾರಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಉಳಿದ ಶೌಚಾಲಯಗಳನ್ನು ಆಕರ್ಷಕವಾಗಿ ಅಲಂಕೃತಗೊಳಿಸಿ, ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂಬುದಾಗಿ ನ್ಯಾಯಾಧೀಶರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರುಗಳಾದ ಶ್ರೀಮತಿ ಮೀನಾಕ್ಷಿ, ಆರೋಗ್ಯ ನಿರೀಕ್ಷಕ ಅಶೋಕ್, ಅಜಯ್ ಕುಮಾರ್, ಮೋಹನ್, ಸೇರಿದಂತೆ ನಗರಸಭೆ ಸಿಬ್ಬಂದಿವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
0 Comments