ಹಿರಿಯೂರು :
ನಗರದ ನೆಹರು ಮಾರುಕಟ್ಟೆ ವ್ಯಾಪಾರಿಗಳ ಮನವಿಯ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಭಾನುವಾರ ಬೆಳಿಗ್ಗೆ ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ನಗರಸಭೆಯವರು ಕಳೆದ ಎರಡು ದಿನಗಳ ಹಿಂದೆ ಟ್ರಾಫಿಕ್ ಸಮಸ್ಯೆಯ ಕಾರಣದಿಂದ ಮಾರ್ಕೆಟ್ ಮುಂದಿನ ಬಸ್ ನಿಲ್ದಾಣದ ವ್ಯಾಪಾರಿಗಳನ್ನು ಸಂತೆ ಮೈದಾನಕ್ಕೆ ಸ್ಥಳಾಂತರ ಮಾಡುವ ಕಾರ್ಯಚರಣೆ ಕೈಗೊಂಡ ಪರಿಣಾಮ ತರಕಾರಿ ವ್ಯಾಪಾರಿಗಳ ತಂಡ ಸಚಿವರ ಮೊರೆ ಹೋಗಿತ್ತು.
ಈ ವೇಳೆ ವ್ಯಾಪಾರಿಗಳು ಇಲ್ಲಿಂದ ಸಂತೆ ಮೈದಾನಕ್ಕೆ ಸ್ಥಳಾಂತರ ಮಾಡಿದರೆ ಸಂಪೂರ್ಣ ವ್ಯಾಪಾರವೇ ಇಲ್ಲದಂತಾಗುತ್ತದೆ, ಮುಖ್ಯರಸ್ತೆಯಿಂದ ದೂರವಿದ್ದರೆ ವ್ಯಾಪಾರ ಆಗುವುದಿಲ್ಲ, ಇಲ್ಲಿಯೇ ಮಾರ್ಕೆಟ್ ಹಿಂಬದಿ ರಸ್ತೆಯಲ್ಲಿ ಒಂದು ಮಗ್ಗುಲಲ್ಲಿ ಕುಳಿತು ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂಬುದಾಗಿ ವ್ಯಾಪಾರಿಗಳು ಸಚಿವರಿಗೆ ಮನವಿ ಮಾಡಿದರು.
ವ್ಯಾಪಾರಿಗಳ ಬೇಡಿಕೆಗೆ ಉತ್ತರಿಸಿದ ಸಚಿವರು, ಈ ಭಾಗದಲ್ಲಿನ ಟ್ರಾಫಿಕ್ ಸಮಸ್ಯೆಗೆ ಇತಿಶ್ರೀ ಹಾಡಲೇಬೇಕಿದೆ, ಹಾಗಂತ ಇಲ್ಲಿನ ವ್ಯಾಪಾರಿಗಳ ದುಡಿಮೆಗೆ ತೊಂದರೆಯಾಗುವಂತಹ ನಿರ್ಧಾರ ಮಾಡುವುದಿಲ್ಲ, ಒಂದೆರಡು ದಿನದಲ್ಲಿ ಟ್ರಾಫಿಕ್ ಆಗದಂತೆ ವ್ಯಾಪಾರಕ್ಕೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು ಎಂಬುದಾಗಿ ಭರವಸೆ ನೀಡಿದರು.
ನಗರಸಭೆ ಪೌರಾಯುಕ್ತರಾದ ಹೆಚ್.ಮಹಾಂತೇಶ್ ಮಾತನಾಡಿ, ಬಸ್ ಅಪಘಾತದ ನಂತರ ಈ ಭಾಗದಲ್ಲಿ ಎಲ್ಲೆಂದರಲ್ಲಿ ವ್ಯಾಪಾರ ಮಾಡುವುದು ಹೂವಿನ ಮಾರ್ಕೆಟ್ ಗೆ ಬರುವವರು ಉಂಟು ಮಾಡುತ್ತಿದ್ದ ಟ್ರಾಫಿಕ್ ಗೆ ಕಡಿವಾಣ ಹಾಕಲು ನಗರಸಭೆ ವತಿಯಿಂದ ಕ್ರಮ ತೆಗೆದುಕೊಂಡಿದ್ದೇವೆ, ಮಾರ್ಕೆಟ್ ನೊಳಗೆ ಕುಳಿತು ವ್ಯಾಪಾರ ಮಾಡಲು ಮೂಲಭೂತ ಸೌಕರ್ಯ ಕೊಡುತ್ತಿದ್ದೇವೆ ಎಂದರಲ್ಲದೆ,
ಇಲ್ಲಿನ ವ್ಯಾಪಾರಿಗಳ ಉಪಯೋಗಕ್ಕೆ ಎಂದು ನಿರ್ಮಿಸಿರುವ ಶೌಚಾಲಯವನ್ನು ಸುಸಜ್ಜಿತಗೊಳಿಸಲಾಗಿದೆ, ಮಾರ್ಕೆಟ್ ನ ಒಳಗೆ ಬೆಳಕಿನ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ, ಇದೀಗ ಸಚಿವರ ಬಳಿ ಅವರ ಅಹವಾಲು ಸಲ್ಲಿಸಿದ್ದಾರೆ, ಒಟ್ಟಿನಲ್ಲಿ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆ ಆಗದ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಜಯ್ ಕುಮಾರ್, ಆರೋಗ್ಯ ನಿರೀಕ್ಷಕಿ ಸಂಧ್ಯಾ, ನಾಗಲಕ್ಷ್ಮಿ, ಬಾಬು ಇತರರು ಹಾಜರಿದ್ದರು.
ಭಗವಂತನಲ್ಲಿ ಪ್ರೇಮಭಕ್ತಿ ಅವಶ್ಯವಾದದ್ದು:- ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಅಭಿಪ್ರಾಯ.
ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಎರಡನೇ ದಿನದ ಶ್ರೀಮದ್ ಭಾಗವತ ಸಪ್ತಾಹ...
0 Comments