ಚಿತ್ರದುರ್ಗ ಮಾ.16 :
ಭಾರತೀಯ ಚುನಾವಣೆ ಆಯೋಗದ ನಿರ್ದೇಶನದಂತೆ ಪ್ರಸಕ್ತ ವರ್ಷದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಮುನ್ನವೇ ರಾಜ್ಯದಲ್ಲಿ ಚುನಾವಣೆ ಅಕ್ರಮಕ್ಕೆ ಕಡಿವಾಣ ಹಾಕಬೇಕಿದ್ದು, ಈ ನಿಟ್ಟಿನಲ್ಲಿ ನೀತಿ ಸಂಹಿತೆ ಪೂರ್ವ ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಅಧಿಕಾರಿಗಳು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ. ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾದರಿ ಚುನಾವಣೆ ನೀತಿ ಸಂಹಿತೆ ಕುರಿತು ವಿವಿಧ ಚುನಾವಣೆ ಸಮಿತಿಗಳ ನೋಡಲ್ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರ ಹಾಗೂ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನ ಐ.ಪಿ.ಸಿ, ಸಿ.ಆರ್.ಪಿ.ಸಿ, ಅಬಕಾರಿ, ವಾಣಿಜ್ಯ ಸೇರಿದಂತೆ ಇತರೆ ಕಾಯ್ದೆಗಳ ಅಡಿ ಚುನಾವಣೆ ಅಕ್ರಮಗಳನ್ನು ತಡೆಗಟ್ಟುವಂತಗೆ ಈಗಾಗಲೆ ಚುನಾವಣಾ ಆಯೋಗ ಸೂಚನೆಗಳನ್ನು ನೀಡಿದೆ. ಒಮ್ಮೆ ಮಾದರಿ ನೀತಿ ಸಂಹಿತೆ ಜಾರಿಯಾದರೆ ಜನಪ್ರತಿನಿಧಿಗಳ ಕಾಯ್ದೆ ಅನುಸಾರ ಚುನಾವಣೆ ಅಕ್ರಮಗಳ ತಡೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.
ನೀತಿಸಂಹಿತೆ ಪೂರ್ವದಲ್ಲಿಯೇ ಸಂಭವನೀಯ ಅಕ್ರಮಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಈಗಾಗಲೆ ಅಂತರರಾಜ್ಯ ಗಡಿ ಭಾಗಗಳಲ್ಲಿ ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅನಧಿಕೃತವಾಗಿ ಹೆಚ್ಚಿನ ಪ್ರಮಾಣದಲ್ಲಿ ನಗದು, ಮದ್ಯ, ಸೀರೆ, ಕುಕ್ಕರ್ ಮತ್ತಿತರ ಸಾಮಗ್ರಿಗಳ ಸಾಗಣೆ, ಶಸ್ತ್ರಾಸ್ತ್ರಗಳ ಸಾಗಣೆ ಸೇರಿದಂತೆ ಇಂತಹವುಗಳ ಮೇಲೆ ನಿಗಾ ವಹಿಸಿ, ಈ ಸಾಮಗ್ರಿಗಳು ಎಲ್ಲಿಂದ, ಯಾರಿಗಾಗಿ ಬಂದಿವೆ, ಸಾಗಾಣಿಕೆ ಮಾರ್ಗದ ವಿವರಗಳನ್ನು ಪರಿಶೀಲಿಸಬೇಕು. ಕೇವಲ ಚೆಕ್ಪೋಸ್ಟ್ಗಳಲ್ಲಿ ಮಾತ್ರವಲ್ಲದೆ, ಇತರೆ ಪ್ರವೇಶ ಮಾರ್ಗಗಳಲ್ಲೂ ತೀವ್ರ ಕಟ್ಟೆಚ್ಚರ ವಹಿಸಬೇಕು. ಚೆಕ್ಪೋಸ್ಟ್ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ವೆಬ್ಕ್ಯಾಸ್ಟಿಂಗ್ ಮೂಲಕ ಲೈವ್ ದೊರಕುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಧಿಕಾರಿ, ಸಿಬ್ಬಂದಿಗಳು ಯಾವುದೇ ಲೋಪದೋಷಗಳಾಗದಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ, ಅನುಮತಿ ರಹಿತ ಫಲಕಗಳನ್ನು ಆಯಾ ಸ್ಥಳೀಯ ಸಂಸ್ಥೆಗಳು ಕೂಡಲೆ ತೆರವುಗೊಳಿಸಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೂಡ ತಮ್ಮ ಪರಿಶೀಲನಾ ಚಟುವಟಿಕೆಯನ್ನು ಈಗಿನಿಂದಲೇ ತೀವ್ರಗೊಳಿಸಬೇಕು. ಚುನಾವಣೆ ಕುರಿತಂತೆ ಅಧಿಕಾರಿ, ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಏರ್ಪಡಿಸುವ ತರಬೇತಿ ಕಾರ್ಯಗಾರದಲ್ಲಿ ತಪ್ಪದೆ ಭಾಗವಹಿಸಬೇಕು. ಗೈರುಹಾಜರಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಮಾದರಿ ವಿಕಲಚೇತನರು :
********* ನಿವೃತ್ತಿಯ ಅಂಚಿನಲ್ಲಿರುವವರು, ಗರ್ಭಿಣಿಯರು, ವಿಕಲಚೇತನರು ಮುಂತಾದ ವಿಶೇಷ ವರ್ಗದವರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ. ಆದರೆ, ಜಿಲ್ಲೆಯಲ್ಲಿ 176 ವಿಕಲಚೇತನ ಸರ್ಕಾರಿ ನೌಕರರು ಸ್ವಯಂಪ್ರೇರಿತವಾಗಿ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಇಲ್ಲದ ಸಬೂಬು ಹೇಳಿಕೊಂಡು, ಚುನಾವಣಾ ಕರ್ತವ್ಯದಿಂದ ನುಣುಚಿಕೊಳ್ಳಲು ಬಯಸುವಂತಹ ನೌಕರರಿಗೆ ನಿಜಕ್ಕೂ ಇವರು ಪ್ರೇರಣೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಶ್ಲಾಘಿಸಿದರು. 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರು ತಮ್ಮ ಮನೆಯಿಂದಲೇ ಮತದಾನ ಮಾಡುವಂತಹ ಅವಕಾಶವನ್ನು ಈ ಬಾರಿ ಚುನಾವಣಾ ಆಯೋಗ ಕಲ್ಪಿಸಿದ್ದು, ಅರ್ಹರು ಇದರ ಸೌಲಭ್ಯ ಪಡೆಯಬಹುದಾಗಿದೆ. ಆದರೆ ದೈಹಿಕವಾಗಿ ಶಕ್ತರಿರುವರು ಮತಗಟ್ಟೆಗೆ ಬಂದು ಮತ ಚಲಾಯಿಸುವುದು ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದಂತಹ ಅನುಭವವನ್ನು ಅವರಿಗೆ ನೀಡುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ನಿಯಮಗಳನ್ನು ಪಾಲಿಸದ ಬ್ಯಾಂಕ್ಗಳು :
*************ಆದಾಯ ತೆರಿಗೆ ಇಲಾಖೆ ಅಧಿಕಾರಿ ಸುಬ್ಬರಾಜು ಅವರು ಮಾತನಾಡಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಗದು ಮೊತ್ತವನ್ನು ಸಾಗಣೆ ಮಾಡುವಾಗ, ನಿಯಮ ಹಾಗೂ ಮಾರ್ಗಸೂಚಿಗಳನ್ನು ಬ್ಯಾಂಕ್ಗಳು ಪಾಲಿಸಬೇಕಾಗುತ್ತದೆ. ಆದರೆ ಬಹಳಷ್ಟು ಬ್ಯಾಂಕ್ಗಳು ನಿಯಮಗಳನ್ನು ಪಾಲಿಸದೆ ತೊಂದರೆಗೆ ಸಿಲುಕಿಕೊಳ್ಳುತ್ತವೆ. ಸಾಮಾನ್ಯವಾಗಿ ಗ್ರಾಮೀಣ ಬ್ಯಾಂಕ್ಗಳು ಇಂತಹ ಲೋಪವನ್ನು ಎಸಗುತ್ತವೆ. ಈ ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ಬಹುತೇಕ ಪ್ರಕರಣಗಳಲ್ಲಿ, ಇದನ್ನು ಗಮನಿಸಲಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆ ನೀತಿ ಸಂಹಿತೆ ಸಂದರ್ಭದಲ್ಲಿ ಬ್ಯಾಂಕ್ಗಳು ಇಂತಹ ಸಂಕಷ್ಟಕ್ಕೆ ಸಿಲುಕದೆ, ಹಣ ಸಾಗಾಣೆ ಸಂದರ್ಭದಲ್ಲಿ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಧಿಕಾರಿ ಆರ್.ಚಂದ್ರಯ್ಯ, ಜಿ.ಪಂ. ಉಪಕಾರ್ಯದರ್ಶಿ ಚಂದ್ರಯ್ಯ, ಮುಖ್ಯ ಯೋಜನಾಧಿಕಾರಿ ಗಾಯತ್ರಿ ಸೇರಿದಂತೆ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments