ನಾಯಕನಹಟ್ಟಿ: ಗುರು ತಿಪ್ಪೇರುದ್ರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಸಂಜೆ 6.30ಕ್ಕೆ ಆಕಾಶ ದೀಪವನ್ನು ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ದೀಪೋತ್ಸವದಲ್ಲಿ ಸುಮಾರು 1 ಲಕ್ಷ ದೀಪಗಳನ್ನು ಭಕ್ತರು ಬೆಳಗಿಸಿದರು. ತಲಾ 108 ಹಣತೆಗಳಿರುವ 240 ದೀಪಸ್ತಂಭಗಳನ್ನು ಈ ಬಾರಿ ವ್ಯವಸ್ಥೆ ಮಾಡಲಾಗಿತ್ತು.
ಒಳಮಠ, ಹೊರಮಠ, ಈಶ್ವರ ದೇವಾಲಯ, ಏಕಾಂತಮಠದ ಗೋಪುರಗಳಿಗೆ ದೀಪಾಲಂಕಾರ ಮಾಡಲಾಗಿದೆ. ರಾತ್ರಿ 8ಕ್ಕೆ ದೇವಾಲಯದ ಆವರಣದಲ್ಲಿ ಬೆಳ್ಳಿ ರಥೋತ್ಸವ ನೆರವೇರಿಸಲಾಯಿತು. ದೇವಾಲಯದ ಮುಂಭಾಗದಲ್ಲಿ ಚಳ್ಳಕೆರೆಯ ನೃತ್ಯನಿಕೇತನ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ಆಕರ್ಷಕ ಭರತನಾಟ್ಯ ಪ್ರದರ್ಶಿಸಿದರು.
ಲಕ್ಷ ದೀಪೋತ್ಸವದ ವಿಶೇಷತೆ: ಹಲವು ದಶಕಗಳಿಂದ ಕಾರ್ತಿಕ ಮಾಸದಲ್ಲಿ ದೀಪೋತ್ಸವ ನಡೆಸಿಕೊಂಡು ಬರಲಾಗುತ್ತಿದೆ ಎಂದು ದೇವಾಲಯ ಕಾರ್ಯನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ ತಿಳಿಸಿದ್ದಾರೆ.
ಉಪವಿಭಾಗಾಧಿಕಾರಿ ಎಂ. ಕಾರ್ತಿಕ್, ಪಟ್ಟಣ ಪಂಚಾಯಿತಿ ಸದ್ಯಸರಾದ ಎನ್.ಮಹಾಂತಣ್ಣ, ವಿನುತಾ ಮಂಜುನಾಥ್ ಭಾಗವಹಿಸಿದ್ದರು. ಗ್ರಾಮಸ್ಥರಾದ ಎಂ.ವೈ.ಟಿ.ಸ್ವಾಮಿ, ಜೆ.ಪಿ.ರವಿಶಂಕರ್, ಜೀವಿತ್ಕುಮಾರ್, ಗಂಗಣ್ಣ, ಉಮೇಶ, ದೇವಾಲಯದ ಸಿಬ್ಬಂದಿ ಎಸ್.ಸತೀಶ್, ರುದ್ರೇಶ, ಅರ್ಚಕರಾದ ಅಭಿಷೇಕ್, ರವಿಕುಮಾರ್, ಸಾವಿರಾರು ಭಕ್ತರು ಇದ್ದರು.
0 Comments