ಹಿರಿಯೂರು:
ತಾಲ್ಲೂಕಿನ ವಾಣಿವಿಲಾಸಪುರ ರಸ್ತೆಯಲ್ಲಿರುವ ಉಪ್ಪಾರಹಟ್ಟಿ ಗ್ರಾಮದಲ್ಲಿ ರುದ್ರಭೂಮಿ ಇಲ್ಲದ ಕಾರಣ ಮೃತ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರವನ್ನು ಮಾರಿಕಣಿವೆ ರಸ್ತೆ ಬಳಿ ಮಾಡಲು ಸ್ಥಳೀಯರು ಅಡ್ಡಿಪಡಿಸಿದರು. ಇದರಿಂದ ಪೊಲೀಸ್ ಭದ್ರತೆಯಲ್ಲಿ ಬುಧವಾರ ಸಂಜೆ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲಾಯಿತು.
ಉಪ್ಪಾರಹಟ್ಟಿಯಲ್ಲಿ ಮಂಗಳವಾರ ರಾತ್ರಿ ಕಲ್ಲಪ್ಪ ಅವರು ಮೃತಪಟ್ಟಿದ್ದರು. ಗ್ರಾಮದಲ್ಲಿ ರುದ್ರಭೂಮಿ ಇಲ್ಲದ ಕಾರಣಕ್ಕೆ ಅವರ ಅಂತ್ಯಕ್ರಿಯೆ ರಸ್ತೆ ಬದಿಯಲ್ಲಿ ನಡೆಸಲು ಸ್ಥಳೀಯರು ಅವಕಾಶಕೊಟ್ಟಿರಲಿಲ್ಲ, ಸ್ಥಳೀಯರು ಹಾಗೂ ಸಂಬಂಧಿಕರು ಆಕ್ರೋಶಗೊಂಡು ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ರುದ್ರಭೂಮಿ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದರು.
ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ರಾಜೇಶ್ ಕುಮಾರ್ ಮೃತರ ಸಂಬಂಧಿಕರ ಮನ ಒಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಪೊಲೀಸ್ ಭದ್ರತೆಯಲ್ಲಿ ಮೊದಲು ಅಂತ್ಯಸಂಸ್ಕಾರ ಮಾಡುತ್ತಿದ್ದ ಜಾಗದಲ್ಲಿಯೇ ಅಂತ್ಯಕ್ರಿಯೆ ಮಾಡಿಸಿ, ವಾರದೊಳಗೆ ರುದ್ರಭೂಮಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಉಪ್ಪಾರಹಟ್ಟಿ ಗ್ರಾಮದಲ್ಲಿ ಉಪ್ಪಾರ ಸಮುದಾಯಕ್ಕೆ ಸೇರಿದ ನೂರು ಮನೆಗಳಿದ್ದು, ಸುಮಾರು 600ಕ್ಕೂ ಹೆಚ್ಚು ಜನರಿದ್ದಾರೆ. ಹಟ್ಟಿಯಲ್ಲಿರುವ ಯಾರಿಗೂ ಒಂದಿಂಚು ಭೂಮಿ ಇಲ್ಲ. ಕೂಲಿಯೇ ಎಲ್ಲರಿಗೂ ಬದುಕಿನ ಆಧಾರ. ಹಟ್ಟಿಯಲ್ಲಿ ಯಾರಾದರೂ ಮರಣ ಹೊಂದಿದರೆ ಶವಸಂಸ್ಕಾರ ಮಾಡಲು ಜಾಗ ಕೇಳುವುದೇ ತಪ್ಪಾ ಎಂಬ ಪ್ರಶ್ನೆ ಗ್ರಾಮಸ್ಥರದ್ದಾಗಿದೆ.
ಈಗಾಗಲೇ ಯರದಕಟ್ಟೆ ಗೋಮಾಳದ ಸರ್ವೆ ನಂ 19ರಲ್ಲಿ 1. 17 ಎಕರೆ ಜಮೀನನ್ನು ರುದ್ರಭೂಮಿಗೆ ಮಂಜೂರು ಮಾಡಿ ಪಹಣಿ ಬಂದಿದ್ದು. ಒಂದು ವರ್ಷ ಕಳೆದಿದೆ. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಏಳೆಂಟು ಮಂದಿ ಮರಣ ಹೊಂದಿದ್ದಾರೆ. ಆದಾಗ್ಯೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಅಲ್ಲಿನ ಸ್ಥಳೀಯರು ಬಿಡುತ್ತಿಲ್ಲ. ಆದ್ದರಿಂದ ವಿ.ವಿ.ಪುರ ರಸ್ತೆಯ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.
ಉಪ್ಪಾರ ಜನಾಂಗದ ಮುಖಂಡ ನಾಗರಾಜ್ ಉಪ್ಪಾರ ಮಾತನಾಡಿ, ಉಪ್ಪಾರಹಟ್ಟಿ ಗ್ರಾಮಕ್ಕೆ ರುದ್ರಭೂಮಿ ನೀಡುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಧಿಕಾರಿ ಮದ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಪಡಿಸಬೇಕು. ಸಚಿವ ಡಿ.ಸುಧಾಕರ್ ರುದ್ರಭೂಮಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪ್ಪಾರ ಸಮಾಜದ ನಿಕಟಪೂರ್ವ ಆಧ್ಯಕ್ಷ ಅಲೂರು ರಾಮಣ್ಣ, ನಿಂಗರಾಜ, ಶೇಖರಪ್ಪ, ಕಾಂತರಾಜ್, ಮಹಾಲಿಂಗಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments