ಹಿರಿಯೂರು : ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರದಲ್ಲಿ ಅನಾಥರಿಗೆ, ವೃದ್ಧರಿಗೆ, ಬಡವರಿಗೆ ವಿಶೇಷ ವೃದ್ಧಾಶ್ರಮ ಪ್ರಾರಂಭಿಸಲಾಗುವುದು ಎಂದು ಸ್ಥಳೀಯ ಅಭ್ಯರ್ಥಿ ಗನ್ನಾಯಕನಹಳ್ಳಿ ಹೆಚ್ ಮಹೇಶ್ ಭರವಸೆ ನೀಡಿದರು.
ನಗರದ 14ನೇ ವಾರ್ಡ್ ನಲ್ಲಿ ಮನೆ ಮನೆಗೆ ತೆರಳಿ ಅಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವರನ್ನು ಉದ್ದೇಶಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಬಡವರಿಗೆ ಅರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಬಡವರ ಮನೆಗಳಲ್ಲಿ ನಡೆಯುವ ಮದುವೆಗೆ ನಿಮ್ಮ ಸಹೋದರನಾಗಿ ನಾನು ಐದು ಸಾವಿರ ರೂಪಾಯಿ ವೈಯಕ್ತಿಕವಾಗಿ ನೀಡುತ್ತೇನೆ ಎಂದರು.
ಬರುವ ಚುನಾವಣೆಯಲ್ಲಿ ಇಲ್ಲಿನ ಜನರಿಗೆ ಮಂಕುಬೂದಿ ಎರಚಲು ಹೊರಗಿನ ಅಭ್ಯರ್ಥಿಗಳು ಸಿದ್ಧತೆಯಲ್ಲಿದ್ದಾರೆ. ಆದರೆ ಕ್ಷೇತ್ರದ ಭವಿಷ್ಯದ ದೃಷ್ಟಿಯಿಂದ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಿ ಎಂದರು.
ಇದಲ್ಲದೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳ ಹೆಸರಿನ ಖಾತೆಯಲ್ಲಿ ಬ್ಯಾಂಕ್ ನಲ್ಲಿ ಹಣ ಠೇವಣಿ ಮಾಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು. ಇದರ ಜೊತೆಗೇ ಈಗಾಗಲೇ ಪಕ್ಷದ ನಾಯಕ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದಂತೆ ಒಂದು ಸಾವಿರದಿಂದ ಹತ್ತು ಲಕ್ಷದವರೆಗೆ ವೆಚ್ಚ ಭರಿಸಲಾಗುವುದು ಎಂದು ಹೇಳಿದ್ದಾರೆ. ಇಂತಹ ವ್ಯಕ್ತಿಗೆ ಅವಕಾಶ ಮಾಡಿಕೊಡಿ ಎಂದು ತಿಳಿಸಿದರು.
ಸರ್ಕಾರ ರಾಜ್ಯದಲ್ಲಿ ಹತ್ತು ಲಕ್ಷ ಮನೆ ಮಂಜೂರು ಮಾಡಿದೆ. ಆದರೆ ಇಲ್ಲಿನ ಜನರು ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದಾರೆ, ಮಂಜೂರಾದ ಮನೆಗಳು ಎಲ್ಲೋದಾವು ಎಂದು ಆರೋಪಿಸಿದರು.
0 Comments