ಹಿರಿಯೂರು :
ತಾಲೂಕಿನ ಫಿಲಾಜನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ದಾನಿಗಳ ನೆರವಿನಿಂದ ಬೆಳೆಸಿದ್ದ ತೆಂಗಿನ ಗಿಡಗಳು ಬಿಸಿಲಿಗೆ ಒಣಗುತ್ತಿದ್ದನ್ನು ಕಂಡ ಮುಖ್ಯ ಶಿಕ್ಷಕರಾದ ಆರ್.ಟಿ.ಎಸ್ ಶ್ರೀನಿವಾಸ್ ರವರು ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರು ಹಾಯಿಸಿ ಈ ಬೇಸಿಗೆ ಸುಡುಬಿಸಿಲಿನಲ್ಲೂ ಗಿಡಗಳನ್ನು ಉಳಿಸುವ ಕೆಲಸ ಮಾಡಿದ್ದಾರೆ.
ಮುಖ್ಯ ಶಿಕ್ಷಕ ಆರ್.ಟಿ.ಎಸ್ ಶ್ರೀನಿವಾಸ್ ಅವರು ಕಳೆದ ವರ್ಷ ದಾನಿಗಳ ನೆರವಿನಿಂದ ಸುಮಾರು 100 ತೆಂಗಿನಗಿಡಗಳನ್ನು ತರಿಸಿ ಶಾಲಾ ಆವರಣದಲ್ಲಿ ನೆಟ್ಟಿದ್ದರು, ಆದರೆ ಶಾಲಾ ಆವರಣದಲ್ಲಿದ್ದ ಕೊಳವೆ ಬಾವಿಯಲ್ಲಿನ ನೀರು ಎರಡು ತಿಂಗಳ ಹಿಂದೆ ಬತ್ತಿ ಹೋಗಿತ್ತು, ನೀರಿಲ್ಲದೆ ಐದಾರು ತೆಂಗಿನ ಗಿಡಗಳು ಸಂಪೂರ್ಣ ಒಣಗಿ ಹೋಗಿದ್ದವು, ಉಳಿದ ಗಿಡಗಳನ್ನಾದರೂ ಉಳಿಸಿಕೊಳ್ಳಲು ಮುಖ್ಯ ಶಿಕ್ಷಕ ಶ್ರೀನಿವಾಸ್ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರುಣಿಸುವ ಕೆಲಸ ಮಾಡಿದ್ದಾರೆ.
ಶಾಲಾ ಕೈತೋಟದಲ್ಲಿ ವಿವಿಧ ಬಗೆಯ ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಬೆಳೆಸಲಾಗಿತ್ತು, ಶಾಲಾ ಕೈತೋಟದಲ್ಲಿ ಬೆಳೆದ ಸೊಪ್ಪು ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸಲಾಗುತ್ತಿತ್ತು. ಕಬ್ಬು ಬಾಳೆಹಣ್ಣನ್ನು ಎಲ್ಲಾ ಮಕ್ಕಳಿಗೂ ನೀಡಲಾಗುತ್ತಿತ್ತು, ಕೊಳವೆ ಬಾವಿ ಬತ್ತಿ ಹೋಗಿರುವುದರಿಂದ ತೆಂಗಿನ ಸಸಿಗಳು ಮಾತ್ರ ಉಳಿದುಕೊಂಡಿದ್ದು,
ಸುಮಾರು 5 ಎಕರೆಯಲ್ಲಿರುವ ಶಾಲಾ ಅವರಣದಲ್ಲಿ ಬೀಳುವ ಮಳೆಯ ನೀರು ಕೊಳವೆ ಬಾವಿಗೆ ಇಂಗುವಂತೆ ಮಾಡಲು ನೆರವು ನೀಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಲಾಗಿದ್ದು, ಮಳೆ ಬರುವವರೆಗೂ ಗಿಡಗಳಿಗೆ ಈ ರೀತಿ ನೀರು ಹರಿಸಲಾಗುವುದು ಎಂದು ಮುಖ್ಯಶಿಕ್ಷಕ ಆರ್.ಟಿ.ಎಸ್. ಶ್ರೀನಿವಾಸ್ ರವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
0 Comments