ಹಿರಿಯೂರು:
ತಾಲ್ಲೂಕಿನ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೂ ವಾಣಿವಿಲಾಸ ಸಾಗರ ಜಲಾಶಯದಿಂದ ನೀರು ಪೂರೈಕೆ ಮಾಡಲಾಗುವುದು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ತಾಲೂಕಿನ ಐಮಂಗಲದ ಬೋರಪ್ಪ ಕಾಲೇಜಿನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಗ್ಯಾರಂಟಿ ಯೋಜನಾ ಸಮಾವೇಶ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಐಮಂಗಲ ಹೋಬಳಿಯಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಇದೆ. ನೀರಿಗಾಗಿ ಸಾವಿರ ಅಡಿವರೆಗೆ ಕೊಳವೆಬಾವಿ ಕೊರೆಸಬೇಕು. ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುತ್ತದೆ.ಇದು ಕುಡಿಯಲು ಯೋಗ್ಯವಲ್ಲ, ನೀರನ್ನು ಶುದ್ಧಿಕರಿಸದೇ ಹಾಗೆ ಸೇವನೆ ಮಾಡಿದರೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಇದನ್ನು ಗಮನಿಸಿ ವಾಣಿವಿಲಾಸ ಸಾಗರದಿಂದ ಶಾಶ್ವತ ಕುಡಿಯುವ ನೀರಿನ ಪೂರೈಕೆ ಮಾಡಬೇಕೆಂಬುದು ಈಭಾಗದ ಜನರ ಬಹು ದಿನದ ಬೇಡಿಕೆ. ನಾನು ಶಾಸಕನಾಗಿದ್ದ ವೇಳೆ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಇಷ್ಟು ಹೊತ್ತಿಗಾಗಲೇ ಈ ಭಾಗದ ಜನರಿಗೆ ನೀರು ಸಿಗಬೇಕಿತ್ತು.
ಆದರೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕಾರಣ, ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಹಿಂದಿನ ಸರ್ಕಾರದವರು ಈ ಕೆಲಸ ಪೂರ್ಣಗೊಳಿಸಬಹುದಿತ್ತು. ಆದರೆ ಅವರಿಗೆ ಅಭಿವೃದ್ದಿ ಬಗ್ಗೆ ಉತ್ಸಾಹ ಇರದ ಕಾರಣ ಹಾಗೆಯೇ ತಳ್ಳಿಕೊಂಡು ಬಂದಿದ್ದಾರೆ. ನಾನು ಶಾಸಕನಾಗಿ ಆರಂಭ ಮಾಡಿದ ಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವನಾಗಿರುವಾಗ ಉದ್ಘಾಟನೆ ಮಾಡುತ್ತಿರುವುದು ಸಂತೋಷವಾಗಿದೆ.
ಈ ಬಾರಿ ಬರಗಾಲ ಇರುವುದರಿಂದ ನೀರಿನ ಸಮಸ್ಯೆ ಉಲ್ಬಣಿಸಬಹುದು, ಕೊಳವೆ ಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದರಲ್ಲದೆ, ನಾವು ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ಗುರಿ ಹೊಂದಿದ್ದೇವೆ. ಶಕ್ತಿ ಯೋಜನೆಯಿಂದ ಮಹಿಳೆಯರು ರಾಜ್ಯದ ಯಾವುದೇ ಭಾಗಕ್ಕೆ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ, ಗೃಹಜ್ಯೋತಿಯಿಂದ ಉಚಿತ ವಿಧ್ಯುತ್ ಸೌಲಭ್ಯ, ಗೃಹ ಲಕ್ಷ್ಮಿ ಯೋಜನೆಯಿಂದ ಮನೆ ಯಜಮಾನಿಗೆ 2000 ರೂ, ಅನ್ನಭಾಗ್ಯದಿಂದ 5ಕೆಜಿ ಅಕ್ಕಿ ಮತ್ತು 170ರೂ, ಯುವನಿಧಿಯಿಂದ ಪದವಿಧರ ನಿರುದ್ಯೋಗಿಗಳಿಗೆ 3000 ರೂ ವಿಧ್ಯಾರ್ಥಿ ವೇತನ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದಾಗಿ ನಿರುದ್ಯೋಗ ಯುವಕ-ಯುವತಿಯರಿಗೆ ಅನುಕೂಲವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೈಗೊಂಡಿರುವ ಜನಪರ ಕಾಳಜಿಯ ಕೆಲಸಗಳನ್ನು ಕಂಡು ಬಿಜೆಪಿ ಮತ್ತು ಜೆಡಿಎಸ್ ನವರು ಟೀಕಿಸುವುದರಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಕಿತ್ತೊಗೆಯೋಣ. ಮತ್ತಷ್ಟು ಜನೋಪಯೋಗಿ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಲು ಮುಂಬರುವ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಬೇಕು ಎಂಬುದಾಗಿ ಮನವಿ ಮಾಡಿದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಹಟ್ಟಿ ಸಿ.ತಿಪ್ಪೇಸ್ವಾಮಿ ಮಾತನಾಡಿ, ಈ ಭಾಗದ ಜನರ ಬಹುದಿನಗಳ ಬೇಡಿಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಭಗೀರಥ ಪ್ರಯತ್ನದ ಮೂಲಕ ಸಚಿವರು ನಮಗೆ ಕಲ್ಪಿಸಿದ್ದಾರೆ. ಅವರ ಈ ಕೆಲಸವನ್ನು ಇಲ್ಲಿನ ಜನರು ಮರೆಯುವುದಿಲ್ಲ. ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆಗಳನ್ನು ಅನುಷ್ಟಾನಗೊಳಿಸಿರುವ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ ಎಂದರು.
ಐಮಂಗಲದ ರಜಿಯಾ ಬೇಗಂ,ಸೊಂಡೆಕೆರೆ ಮಲ್ಲಮ್ಮ, ಪಾಲವ್ವನಹಳ್ಳಿ ಶಾರದಮ್ಮ ಮತ್ತು ನಾಗವೇಣಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅನಿಸಿಕೆ ಹಂಚಿಕೊಡರು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಾಜೇಶ್ ಕುಮಾರ್, ಡಿಎಚ್.ಒ.ರೇಣುಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶ್, ಎಇಇ ಬಸವಗೌಡ ಪಾಟೀಲ್, ಎಇ ಹಸನ್ ಭಾಷಾ, ಪಶುಇಲಾಖೆಯ ಡಾ.ಹುಸೇನ್, ಐಮಂಗಲ ಗ್ರಾಪಂ.ಅಧ್ಯಕ್ಷ ಎಸ್.ಎನ್.ಮೂರ್ಕಣಪ್ಪ, ವೈದ್ಯ ಡಾ.ರವಿಕುಮಾರ್, ಗೌನಹಳ್ಳಿ ಮಹಾಂತೇಶ್ ಮುಖಂಡರಾದ ಸಿ.ಪ್ರವೀಣ್, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಹರ್ತಿಕೋಟೆ ಮಹಾಂತೇಶ್,ಗೌನಳ್ಳಿ ಮಹಾಂತೇಶ್, ಕೋವೇರ ಹಟ್ಟಿ ಎನ್.ಉಮಾಪತಿ, ಈರಲಿಂಗೇಗೌಡ, ಖಾದಿ ರಮೇಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments