ಚಿತ್ರದುರ್ಗ ಡಿ.19:
ಪೋಲಿಯೋ ರೋಗದ ಹಾಗೇ ಕುಷ್ಠರೋಗವನ್ನು ಸಹ ದೇಶದಿಂದ ನಿರ್ಮೂಲನೆ ಮಾಡಬೇಕು. ‘ಕುಷ್ಠ ರೋಗ ಮುಕ್ತ ಚಿತ್ರದುರ್ಗ ಜಿಲ್ಲೆ’ ಎನ್ನುವ ಘೋಷ ವಾಕ್ಯದೊಂದಿಗೆ ಡಿ.27 ರಿಂದ ಜ.11 ವರೆಗೆ ನಡೆಯುವ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನದಲ್ಲಿ ನಿಖರ ತಪಾಸಣೆ ನಡೆಸಿ, ಶೇ.100 ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚನೆ ನೀಡಿದರು.
ಮಂಗಳವಾರ ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಷ್ಠ ರೋಗದ ಲಕ್ಷಣ, ಸ್ವರೂಪದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಶಾಲೆ ಹಾಗೂ ಹಾಸ್ಟೆಲ್ಗಳಲ್ಲಿ ಮಕ್ಕಳ ತಪಾಸಣೆ ಕೈಗೊಳ್ಳುವುದರ ಮೂಲಕ ಅರಿವು ಮೂಡಿಸಬೇಕು. ಕೊಳಚೆ ಪ್ರದೇಶಗಳು ಹಾಗೂ ಈ ಹಿಂದೆ ಕುಷ್ಠ ರೋಗ ಪತ್ತೆಯಾದ ಏರಿಯಾಗಳಲ್ಲಿ ಹೆಚ್ಚಿನ ತಪಾಸಣೆ ಕಾರ್ಯ ನಡೆಸಬೇಕು. ತಾಯಂದಿರು ಹಾಗೂ ಗರ್ಭಿಣಿಯರಿಗೂ ಈ ಕುರಿತು ಮಾಹಿತಿ ನೀಡಬೇಕು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಎಲ್ಲರ ಸಹಕಾರ ಬೇಕು, ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಈ ವಿಶೇಷ ಅಭಿಯಾನದ ಯಶಸ್ವಿಗೆ ಕೈಜೋಡಿಸಬೇಕು ಎಂದರು.
ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ:
*********ಅಭಿಯಾನವನ್ನು ಯಶಸ್ವಿಗೊಳಿಸುವ ಹಿನ್ನಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾ.ಪಂ. ಇಓ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಅಂತರ್ ಇಲಾಖೆಗಳ ಸಭೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗ್ರಾಮ ಹಾಗೂ ವಾರ್ಡ್ವಾರು ಸಮೀಕ್ಷೆ ಕಾರ್ಯ ನಡೆಸಿ, ತಪಾಸಣೆ ನಿಖರವಾಗಿರಬೇಕು, ಅಲ್ಲದೆ ಈ ಬಗ್ಗೆ ದತ್ತಾಂಶವನ್ನು ಸಂಗ್ರಹಿಸಬೇಕು. ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿ ಕಸ ಸಂಗ್ರಹಿಸುವ ವಾಹನಗಳಲ್ಲಿ ಅಭಿಯಾನದ ಕುರಿತು ಮಾಹಿತಿಯನ್ನು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಬೇಕು. ಬಹಳಷ್ಟು ಜನರು ಕುಷ್ಠ ರೋಗದ ಬಗ್ಗೆ ಕೀಳರಿಮೆ, ಮಾಹಿತಿಯ ಕೊರತೆ ಹಾಗೂ ಮೂಢನಂಬಿಕೆ ಹೊಂದಿ, ವೈದ್ಯರ ಬಳಿ ಬಾರದೆ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಕೆಲವು ಘಟನೆಗಳಲ್ಲಿ ಶಾಶ್ವತ ಅಂಗವೈಕಲ್ಯವು ಉಂಟಾಗಬಹುದು. ಇದಕ್ಕೆ ಅವಕಾಶ ಕೊಡದೆ, ಕುಷ್ಠರೋಗವು ಸಂಪೂರ್ಣ ಗುಣಮುಖವಾಗುವ ಖಾಯಿಲೆಯಾಗಿದೆ ಎಂಬುದನ್ನು ಜನರಿಗೆ ತಿಳಿಯ ಪಡಿಸಬೆಕು. ಸರ್ಕಾರ ಉಚಿತವಾಗಿ ಔಷದೋಪಚಾರಗಳನ್ನು ನೀಡುವುದು. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಕುಷ್ಠರೋಗದಿಂದ ಮುಕ್ತಿ ಹೊಂದಬಹುದು ಎಂಬುದನ್ನು ಮನವರಿಕೆ ಮಾಡಿಕೊಡುವಂತೆ ಅವರು ಹೇಳಿದರು.
ಜಿಲ್ಲೆಯಲ್ಲಿ 61 ಕುಷ್ಠರೋಗ ಪ್ರಕರಣ:
***********ಚಿತ್ರದುರ್ಗ ಜಿಲ್ಲೆಯಲ್ಲಿ ಸದ್ಯ 61 ಕುಷ್ಠರೋಗ ಪ್ರಕರಣಗಳು ಇವೆ. ಇದರಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ ಗರಿಷ್ಠ 29 ಪ್ರಕರಣಗಳು ಪತ್ತೆಯಾಗಿವೆ. ಚಿತ್ರದುರ್ಗ ತಾಲ್ಲೂಕು 14, ಮೊಳಕಾಲ್ಮೂರು 8, ಹೊಳಲ್ಕರೆ 7, ಹಿರಿಯೂರು ತಾಲ್ಲೂಕಿನಲ್ಲಿ 3 ಪ್ರಕರಣಗಳಿವೆ. ಹೊಸದುರ್ಗದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಪ್ರತಿ 10 ಸಾವಿರ ಜನಸಂಖ್ಯೆಗೆ ಜಿಲ್ಲಾ ಅನುಪಾತ 0.34 ಇದ್ದು, ಚಳ್ಳೆಕರೆ ತಾಲ್ಲೂಕಿನಲ್ಲಿ 0.72 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 0.51 ಇದೆ. ಡಿ.27 ರಿಂದ ಜ.11ರ ವರೆಗೆ ಒಟ್ಟು 14 ದಿನಗಳ ಕಾಲ ಕುಷ್ಠರೋಗ ಪತ್ತೆ ಅಭಿಯಾನ ಜರುಗಲಿದ್ದು, 1469 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದ್ದು, ಪ್ರತಿ ದಿನ ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ಸರ್ವೆ ಕೈಗೊಳ್ಳಲಿದ್ದಾರೆ. ಪ್ರತಿ ತಂಡದಲ್ಲೂ ಓರ್ವ ಆಶಾ ಕಾರ್ಯಕರ್ತೆ ಹಾಗೂ ಓರ್ವ ಆರೋಗ್ಯ ಸಹಾಯಕರು ಇರಲಿದ್ದಾರೆ. ಇವರ ಮೇಲೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ ಮನೆ ಮನೆಗೂ ತೆರಳಿ ಸರ್ವೆ ಕಾರ್ಯಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರೇಣುಪ್ರಸಾದ್ ಹಾಗೂ ಕಾರ್ಯಕ್ರಮ ಅನುಷ್ಠಾಧಿಕಾರಿ ಡಾ.ನಾಗರಾಜ ಸಭೆಯಲ್ಲಿ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಾಂತರಾಜ್, ಆರೋಗ್ಯ ಇಲಾಖೆಯ ಡಾ.ಸಿ.ಓ.ಸುಧಾ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಿ.ವಿ.ಗಿರೀಶ್, ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ಆನಂದ್ ಪ್ರಕಾಶ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಭಿಯಾನದ ಪೊಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.
0 Comments