ಧಾರವಾಡ ಮೇ.26: ಸಂಕಷ್ಟದಲ್ಲಿರುವ ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ 31 ಕೇಂದ್ರಗಳ ಮೂಲಕ ರೈತರಿಗೆ ಅಗತ್ಯ ಬೀಜಗಳನ್ನು ಮತ್ತು ಸೊಸೈಟಿ, ಖಾಸಗಿ ಮಾರಾಟಗಾರರು ಸುಮಾರು ಐನೂರಕ್ಕು ಹೆಚ್ಚು ಕೇಂದ್ರಗಳಲ್ಲಿ ರಸಗೊಬ್ಬರ ವಿತರಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಅದಾಗ್ಯೂ ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಬೀಜ, ಗೊಬ್ಬರ ನೀಡಲು ಅನಗತ್ಯ ಷರತ್ತು ವಿಧಿಸುವುದು, ಬೀಜ ಮತ್ತು ಗೊಬ್ಬರದ ಕೃತಕ ಅಭಾವ ಸೃಷ್ಟಿಸುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಲೈಸನ್ಸ್ ರದ್ದು ಪಡಿಸಿ, ಅವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ಜಿಲ್ಲೆಯ ವಾಡಿಕೆ ಮಳೆ (ಏಪ್ರೀಲ್ ಮತ್ತು ಮೇ(25.05.2024) ಮಾಹೆಯ) 91.9 ಮಿ.ಮೀ. ಇದ್ದು 120.1 ಮಿ.ಮಿ. ನಷ್ಟು ಮಳೆಯಾಗಿದ್ದು ಪ್ರಮುಖವಾಗಿ ಮೇ ಮಾಹೆಯಲ್ಲಿ (25.05.2024 ರವರೆಗೆ) 50.5 ಮಿ.ಮೀ ವಾಡಿಕೆ ಮಳೆಗೆ 71.1 ಮಿ.ಮೀ ಮಳೆಯಾಗಿರುತ್ತದೆ. ಮೇ ಮಾಹೆಯಲ್ಲಿ ವಾಡಿಕೆ ಮಳೆಗಿಂತಲೂ ಶೇ 40.79 ರಷ್ಟು ಹೆಚ್ಚು ಮಳೆಯಾಗಿದ್ದು ರೈತರು ಬಿತ್ತನೇ ಪೂರ್ವ ಚಟುವಟಿಕೆಗಳನ್ನು ಹಾಗೂ ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ.
ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಕಾಲಕ್ಕೆ ದೊರೆಯಬೇಕು ಎಂಬ ಸದುದ್ದೇಶದಿಂದ 14 ರೈತ ಸಂಪರ್ಕ ಕೇಂದ್ರಗಳ ಜೊತೆಗೆ 17 ಹೆಚ್ಚುವರಿಯಾಗಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ರಜಾ ದಿನಗಳಲ್ಲೂ ಸಹ ಬೀಜ ವಿತರಣಾ ಕೇಂದ್ರಗಳ ತೆರೆಯಲು ಸೂಚಿಸಲಾಗಿದ್ದು, ಬೀಜ ವಿತರಣೆ ಮಾಡಲಾಗುತ್ತಿದೆ. ಮತ್ತು ಜಿಲ್ಲೆಯಲ್ಲಿ ಮಳೆ ಬಿಡಿಬಿಡಿಯಾಗಿ ಆಗುತ್ತಿದ್ದು, ಸಂಬಂದಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ದಟ್ಟಣೆ ಉಂಟಾದರೆ ತಕ್ಷಣ ಹೆಚ್ಚುವರಿ ಕೌಂಟರ್ ತೆರೆದು ಬೀಜ ವಿತರಿಸಲು ಕೃಷಿ ಇಲಾಖೆ ಮೂಲಕ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
![](https://janadhwani.in/wp-content/uploads/2024/05/FB_IMG_1716723653682.jpg)
ಅನಗತ್ಯವಾಗಿ ರೈತರು ಬೀಜ ಮತ್ತು ಗೊಬ್ಬರ ವಿಷಯದಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ರೈತರು ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ, ರಸಗೊಬ್ಬರ ಖರೀದಿ ಮಾಡುವದರಿಂದ ಉಳಿದ ರೈತರಿಗೂ ಅನುಕೂಲವಾಗುತ್ತದೆ. ಸಮರ್ಪಕ ವಿತರಣೆಗೂ ಸಹಾಯವಾಗುತ್ತದೆ. ಒಂದೇ ರೈತ ಸಂಪರ್ಕ ಕೇಂದ್ರಕ್ಕೆ ಎಲ್ಲರೂ ಒಮ್ಮೆಲೇ ಬಂದಾಗ ಸ್ವಲ್ಪ ಮಟ್ಟಿನ ಗೊಂದಲ, ಹೆಚ್ಚಿನ ಸರತಿ ಸಾಲು ಉಂಟಾಗುತ್ತದೆ. ಜಿಲ್ಲೆಯಲ್ಲಿ ಬೀಜ, ರಸಗೊಬ್ಬರದ ಅಗತ್ಯ ದಾಸ್ತಾನು ಇದ್ದು ರೈತರು ಮಳೆ, ಹವಾಮಾನ ನೋಡಿಕೊಂಡು, ಕೃಷಿ ಇಲಾಖೆ, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಬಿತ್ತನೆ ಮಾಡಬೇಕೆಂದು ಅವರು ಹೇಳಿದ್ದಾರೆ.
![](https://janadhwani.in/wp-content/uploads/2024/05/FB_IMG_1716723650821.jpg)
ರೈತರಿಗೆ ತೊಂದರೆ ಉಂಟು ಮಾಡುವ ಮತ್ತು ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಲೈಸನ್ಸ್ ರದ್ದು: ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಬಿತ್ತನೆ ಬೀಜ, ರಸಗೊಬ್ಬರಗಳ ದಾಸ್ತಾನು ಇದೆ.
ಆದರೂ ಕೆಲವು ಕೃಷಿ ಪರಿಕರ ಮಾರಾಟಗಾರರು, ಸೊಸೈಟಿಗಳ ಸಿಬ್ಬಂದಿಗಳು ಬೀಜ ಖರೀದಿಗೆ ಬರುವ ರೈತರಿಗೆ ಅನಗತ್ಯ ಷರತ್ತು ವಿಧಿಸುವುದು, ಬೀಜ, ಗೊಬ್ಬರದ ಕೊರತೆ ಇದೆ ಎಂದು ಬಿಂಬಿಸಿ, ಬೀಜ ಮತ್ತು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. ಅಂತಹ ಮಾರಾಟಗಾರರ ಲೈಸನ್ಸ್ ತಕ್ಷಣ ರದ್ದುಪಡಿಸಿ, ಅವರ ಮೇಲೆ ಕಾನೂನು ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕ್ರಮಕೈಗೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಕೃಷಿ ಜಾಗೃತ ಕೋಶದ ಅಧಿಕಾರಿಗಳು ನಿಯಮಿತವಾಗಿ ಎಲ್ಲಾ ಮಾರಾಟ ಮಳಿಗೆಗಳನ್ನು ಭೇಟಿ ನೀಡಿ ಪರಿಶೀಲನೆ ಕೈಗೊಂಡು ಜಿಲ್ಲೆಯಾದ್ಯಂತ ಯಾವುದೇ ನಕಲಿ ಕೃಷಿ ಪರಿಕರಗಳ ವಿತರಣೆ ಆಗದಂತೆ ನಿಗಾ ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 650 ಕ್ಕೂ ಹೆಚ್ಚು ಬಿತ್ತನೆ ಬೀಜದ ಮಾದರಿಗಳನ್ನು ಹಾಗೂ ರಸಗೊಬ್ಬರದ 120 ಮಾದರಿಗಳನ್ನು ತೆಗೆದು ಗುಣಮಟ್ಟದ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಕೊಡಲಾಗಿದೆ. ಪ್ರತಿ ವಿತರಣಾ ಕೇಂದ್ರದಿ0ದ ವಿತರಿಸಲಾಗುವ ಬಿತ್ತನೆ ಬೀಜಗಳ ಮೊಳಕೆ ಪ್ರಮಾಣವನ್ನು ಅಲ್ಲಿಯೇ ಪರೀಕ್ಷಿಸಿ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡು ವಿತರಿಸಲಾಗುತ್ತಿದೆ.
ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಮತ್ತು ಸಹಾಯಕ ಕೃಷಿ ನಿರ್ದೇಶಕರಿಗೆ ನಿಯಮಿತವಾಗಿ ಖುದ್ದು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಬೀಜ, ಗೊಬ್ಬರ ವಿತರಣೆ ಕಾರ್ಯವನ್ನು ಪರಿಶೀಲಿಸಿ, ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಯಾವುದೇ ಕೃಷಿ ಪರಿಕರ ಮಾರಾಟ ಅಂಗಡಿಯವರು ಬೀಜ ಅಥವಾ ಗೊಬ್ಬರ ನೀಡಲು ಬೇರೆ ಕೃಷಿ ಪರಿಕರ ಖರೀದಿ ಮಾಡುಂತೆ ಕಂಡೀಷನ್ ಹಾಕಿದರೆ, ರೈತರು ನೇರವಾಗಿ ಕೃಷಿ ಇಲಾಖೆ ಹಾಗೂ ಜಾಗೃತದಳದ ಅಧಿಕಾರಿಗಳಿಗೆ ಅಥವಾ ತಹಶಿಲ್ದಾರ ಕಚೇರಿ ಸಹಾಯವಾಣಿಗೆ ಕರೆ ಮಾಡಿ, ಮಾಹಿತಿ ನೀಡಬಹುದು. ಕಾನೂನುಬಾಹಿರವಾಗಿ ವರ್ತಿಸುವ ಅಂಗಡಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
*ಬಿತ್ತನೆ ಗುರಿ:*
ಮುಂಗಾರು ಹಂಗಾಮಿನಲ್ಲಿ 2,70,840 ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ ಇದ್ದು ಪ್ರಮುಖ ಬೆಳೆಗಳಾದ ಹೆಸರು (67,150 ಹೆ), ಹತ್ತಿ (59,000 ಹೆ), ಮುಸುಕಿನಜೋಳ (57,175 ಹೆ), ಸೋಯಾಅವರೆ (33,100 ಹೆ), ಶೇಂಗಾ (25,000 ಹೆ), ಉದ್ದು (7,350 ಹೆ) ಹಾಗೂ ಭತ್ತ (11,522 ಹೆ) ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಉತ್ತಮ ಮಳೆಯ ಹಿನ್ನೆಲೆಯಲ್ಲಿ ಪ್ರಮುಖ ಬೆಳೆಗಳಾದ ಹೆಸರು, ಮುಸುಕಿನ ಜೋಳ, ಸೋಯಾ ಅವರೆ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಈಗಾಗಲೇ 5262 ಹೆ. ಪ್ರದೇಶದಲ್ಲಿ ಜಿಲ್ಲೆಯಾದ್ಯಂತ ಬಿತ್ತನೆ ಮಾಡಲಾಗಿದೆ.
*ಬಿತ್ತನೆ ಬೀಜ ವಿತರಣೆ:*
ಮುಂಗಾರು ಹಂಗಾಮಿನಲ್ಲಿ ಸಹಾಯಧನದಲ್ಲಿ 20,681 ಕ್ವಿಂಟಲಗಳಷ್ಟು ವಿವಿಧ ಬೆಳೆಗಳ ಬಿತ್ತನೆ ಬೀಜ ವಿತರಣೆ ಬೇಡಿಕೆ ಇದ್ದು, ಈಗಾಗಲೇ ಒಟ್ಟು 23,779 ಕ್ವಿಂ ನಷ್ಟು ಬಿತ್ತನೆ ಬೀಜ ಲಭ್ಯವಿದೆ. ಜಿಲ್ಲೆಯಲ್ಲಿ ಒಟ್ಟಾರೆ 8086 ಕ್ವಿಂಟಲ್ ಅಂದರೆ, ಪ್ರಮುಖ ಬೆಳೆಗಳಾದ ಸೋಯಾಅವರೆ -5,230 ಕ್ವಿಂಟಲ್, ಮೆಕ್ಕೆಜೋಳ- 1050 ಕ್ವಿಂಟಲ್, ಶೇಂಗಾ- 732 ಕ್ವಿಂಟಲ್, ಹೆಸರು- 662 ಕ್ವಿಂಟಲ್, ಉದ್ದು- 246 ಕ್ವಿಂಟಲ್ ಹಾಗೂ ಭತ್ತ- 140 ಕ್ವಿಂಟಲ್ ಬಿತ್ತನೆ ಬೀಜಗಳನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ ಮತ್ತು ವಿತರಣಾ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ 2599 ಕ್ವಿಂಟಲ್ ಅಂದರೆ, ಪ್ರಮುಖ ಬೆಳೆಗಳಾದ ಸೋಯಾಅವರೆ -1,818 ಕ್ವಿಂಟಲ್, ಮೆಕ್ಕೆಜೋಳ- 97 ಕ್ವಿಂಟಲ್, ಶೇಂಗಾ- 433 ಕ್ವಿಂಟಲ್, ಹೆಸರು- 193 ಕ್ವಿಂಟಲ್, ಉದ್ದು- 56 ಕ್ವಿಂಟಲ್ ಹಾಗೂ ಭತ್ತ- 6.25 ಕ್ವಿಂಟಲ್ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ.
*ರಸಗೊಬ್ಬರ ವಿತರಣೆ :*
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 56,243 ಮೆಟ್ರಿಕ್ ಟನ್ಗಳಷ್ಟು ವಿವಿಧ ಗ್ರೇಡಗಳ ರಸಗೊಬ್ಬರಗಳ ಅವಶ್ಯಕತೆ ಇದ್ದು, ಮೇ-2024 ರ ಅಂತ್ಯದವರೆಗೆ 16,749 ಮೆಟ್ರಕ್ ಟನ್ ಅಂದರೆ, ಯೂರಿಯಾ-6478.66, ಡಿಎಪಿ-6570.42, ಎಂಓಪಿ-567.18, ಕಾಂಪ್ಲೇಕ್ಸ್-2767.17, ಎಸ್ಎಸ್ಪಿ-366.12 ರಸಗೊಬ್ಬರದ ಬೇಡಿಕೆಯಿದೆ. ಈ ಪೈಕಿ ಈಗಾಗಲೇ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಅಂದರೆ ನಿನ್ನೆಯ (ಮೇ 24)ವರೆಗೆ ಯೂರಿಯಾ-7588, ಡಿಎಪಿ-4752, ಎಂಓಪಿ-207, ಕಾಂಪ್ಲೇಕ್ಸ್-1632, ಎಸ್ಎಸ್ಪಿ-142 ಮೆ.ಟನ್ ಸೇರಿದಂತೆ ಒಟ್ಟು 14,321 ಮೆಟ್ರಿಕ ಟನ್ ರಸಗೊಬ್ಬರ ವಿತರಿಸಲಾಗಿದೆ.
ಅಲ್ಲದೇ, ಚಿಲ್ಲರೆ ಮತ್ತು ಸಗಟು ಮಾರಾಟ ಮಳಿಗೆಗಳಲ್ಲಿ 10,444.37 ಮೆ.ಟನ್, ಕಾಪು ದಾಸ್ತಾನಾಗಿ 3744.50 ಮೆ.ಟನ್, ವೇರ್ ಹೌಸ್ ದಾಸ್ತಾನಾಗಿ 12343.90 ಮೆ.ಟನ್ ಹಾಗೂ ಸಾಗಾಣಿಕೆ ಮತ್ತು ಮಿಶ್ರಣ ಘಟಕಗಳಲ್ಲಿರುವ ದಾಸ್ತಾನು ಸೇರಿದಂತೆ ಯೂರಿಯಾ- 10,272, ಡಿಎಪಿ- 4,118, ಎಂಓಪಿ- 1,840, ಕಾಂಪ್ಲೇಕ್ಸ್- 12,794, ಎಸ್ಎಸ್ಪಿ- 481 ಒಟ್ಟು 29,507.39 ಮೆಟ್ರಿಕ್ ಟನ್ ದಷ್ಟು ರಸಗೊಬ್ಬರ ಜಿಲ್ಲೆಯಲ್ಲಿ ದಾಸ್ತಾನಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
*ರೈತರ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಗಳು:* ಕೃಷಿ ಇಲಾಖೆಯಿಂದ ಬೀಜ ವಿತರಣೆ ಯೋಜನೆಯಡಿ ಸಣ್ಣ, ಅತೀ ಸಣ್ಣ ರೈತರಿಗೆ ಅವರ ಹಿಡುವಳಿ ಅನ್ವಯ ಹಾಗೂ ದೊಡ್ಡ ರೈತರಿಗೆ ಗರಿಷ್ಠ 5 ಎಕರೆಗೆ ಸೀಮಿತವಾಗಿ ರಿಯಾಯತಿ ದರದಲ್ಲಿ ಪ್ರಮುಖ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಬೀಜಗಳ ಕೊರತೆಯಾಗದಂತೆ ಜಿಲ್ಲೆಯ 14 ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ 17 ಉಪ ಮಾರಾಟ ಕೇಂದ್ರ, ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೂಡಾ ಬೀಜ ವಿತರಣೆ ಮಾಡುವ ವ್ಯವಸ್ಥೆ ಕೈಗೊಳ್ಳಲಾಗಿದೆ.
ಅಗತ್ಯವಿದ್ದಲ್ಲಿ ರೈತರು, ರೈತ ಸಂಪರ್ಕ ಧಾರವಾಡ (8277931302), ರೈತ ಸಂಪರ್ಕ ಗರಗ (8277931302), ರೈತ ಸಂಪರ್ಕ ಅಮ್ಮಿನಭಾವಿ (8277931310), ರೈತ ಸಂಪರ್ಕ ಕೇಂದ್ರ ಅಳ್ಳಾವರ (8277931301), ರೈತ ಸಂಪರ್ಕ ಹುಬ್ಬಳ್ಳಿ (8277931324), ರೈತ ಸಂಪರ್ಕ ಕೇಂದ್ರ ಛಬ್ಬಿ (8277931327), ರೈತ ಸಂಪರ್ಕ ಕೇಂದ್ರ ಶಿರಗುಪ್ಪಿ (9380275695), ರೈತ ಸಂಪರ್ಕ ಕೇಂದ್ರ ಕಲಘಟಗಿ (8660062215), ರೈತ ಸಂಪರ್ಕ ಕೇಂದ್ರ ತಬದಕಹೊನ್ನಳ್ಳಿ (8660062215), ರೈತ ಸಂಪರ್ಕ ಕೇಂದ್ರ ದುಮ್ಮವಾಡ (8277931341), ರೈತ ಸಂಪರ್ಕ ಕೇಂದ್ರ ಕುಂದಗೋಳ (6277931357), ರೈತ ಸಂಪರ್ಕ ಕೇಂದ್ರ ಸಂಶಿ (9902534595), ರೈತ ಸಂಪರ್ಕ ಕೇಂದ್ರ ಮೊರಬ (6277931370), ರೈತ ಸಂಪರ್ಕ ಕೇಂದ್ರ ಅಣ್ಣಿಗೇರಿ (8277931361) ಇವುಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
*ಹೆಚ್ಚಿನ ದರ, ಕೃತಕ ಅಭಾವ ಮಾಡಿದರೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ, ದೂರು ನೀಡಿ:*
ಜಿಲ್ಲೆಯಲ್ಲಿ ರೈತರಿಗೆ ಅವಶ್ಯಕವಾದ ಎಲ್ಲ ಕೃಷಿ ಪರಿಕರಗಳ ದಾಸ್ತಾನು ಇದ್ದು, ಎಮ್.ಆರ್.ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ತಾಲೂಕುವಾರು ಕೃಷಿ ಪರಿಕರ ಮಾರಾಟಗಾರರ ಸಭೆ ಜರುಗಿಸಿ, ಎಚ್ಚರಿಕೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಲೈಸನ್ಸ್ ಅಮಾನತು, ರದ್ದತಿ ಸೇರಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಇಂತಹ ದೂರುಗಳಿದ್ದಲ್ಲಿ ರೈತರು, ಧಾರವಾಡ ಉಪ ಕೃಷಿ ನಿರ್ದೇಶಕರು(8277931271), ಧಾರವಾಡ ಸಹಾಯಕ ಕೃಷಿ ನಿರ್ದೇಶಕರು(8277931285), ಕಲಘಟಗಿ ಸಹಾಯಕ ಕೃಷಿ ನಿರ್ದೇಶಕರು(8277931291), ಹುಬ್ಬಳ್ಳಿಯ ಉಪ ಕೃಷಿ ನಿರ್ದೇಶಕರು(8277931272), ಹುಬ್ಬಳ್ಳಿ ಸಹಾಯಕ ಕೃಷಿ ನಿರ್ದೇಶಕರು(8277931288), ಕುಂದಗೋಳ ಸಹಾಯಕ ಕೃಷಿ ನಿರ್ದೇಶಕರು(8277931294), ನವಲಗುಂದ ಸಹಾಯಕ ಕೃಷಿ ನಿರ್ದೇಶಕರು(8277931295),
ಕೃಷಿ ಜಾಗೃತ ಕೊಶದ ಸಹಾಯಕ ಕೃಷಿ ನಿರ್ದೇಶಕರುಗಳು (8277931376 ಮತ್ತು 8277931274)
ಧಾರವಾಡ ಜಂಟಿ ಕೃಷಿ ನಿರ್ದೇಶಕರು (8277931270) ಮತ್ತು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳಿಗೆ ಸಂಪರ್ಕಿಸಿ
ಮಾಹಿತಿ ಮತ್ತು ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments