ನಾಯಕನಹಟ್ಟಿ ಫೆ.24
ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ಮುಕ್ತಿಬಾವುಟ ಹರಾಜು ಪ್ರಕ್ರಿಯೆಗೆ ಕಾನೂನು ರೀತಿಯಲ್ಲಿ ಸೂಕ್ತ ನಿಯಮಾವಳಿ ಪ್ರಕ್ರಿಯೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದ್ದಾರೆ. ಅವರು ಶನಿವಾರ ಪಟ್ಟಣದ ತಿಪ್ಪೇರುದ್ರಸ್ವಾಮಿ ದೇವಾಲಯಲ್ಲಿ ಏರ್ಪಡಿಸಿದ್ದ ಜಾತ್ರಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಮುಖಂಡರಾದ ಕೆ.ತಿಪ್ಪೇರುದ್ರಪ್ಪ ಹಾಗೂ ವೇಣುಗೋಪಾಲ ಮಾತನಾಡಿ, ಜಾತ್ರೆಯ ದಿನ ತಿಪ್ಪೇರುದ್ರಸ್ವಾಮಿ ರಥದ ಮೇಲಿನ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಪಡೆಯುವ ಸಂಪ್ರದಾಯವಿದೆ. ಆದರೆ ಹರಾಜಿನಲ್ಲಿ ಪಡೆದ ಕೆಲವು ಭಕ್ತರು ಲಕ್ಷಗಟ್ಟಲೇ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಸೂಕ್ತ ಮುಕ್ತಿಬಾವುಟ ಪಡೆದ ನಂತರ ಇಂತಿಷ್ಟು ಅವಧಿಯೊಳಗೆ ಹಣವನ್ನು ಪಾವತಿಸುವಂತೆ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ, ಡಿ.ಸುಧಾಕರ್ ನಾನೂ ಕೂಡ ದೇವರ ಭಕ್ತನಾಗಿದ್ದೇನೆ. ಕಳೆದ ವರ್ಷ51 ಲಕ್ಷ ರೂಗಳಿಗೆ ಬಾವುಟವನ್ನು ಪಡೆದಿದ್ದೇನೆ. ಈ ಹಿಂದೆ ಹಲವು ಬಾರಿ ಹರಾಜಿನಲ್ಲಿ ಮುಕ್ತಿ ಬಾವುಟ ಪಡೆದಿದ್ದೇನೆ. ಇದರಿಂದ ನನಗೆ ದೇವರ ಆಶೀರ್ವಾದ ದೊರೆತು ಉಸ್ತುವಾರಿ ಸಚಿವ ಸ್ಥಾನ ದೊರೆತಿದೆ. ಕೆಲವು ವ್ಯಕ್ತಿಗಳು ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಕಾನೂನು ಸಲಹೆ ಪಡೆದು ಸೂಕ್ತ ನಿಯಮಾವಳಿ ರೂಪಿಸಲಾಗುವುದು. ಮಧ್ಯಕರ್ನಾಟಕದ ಪ್ರಮುಖ ಜಾತ್ರೆ ಇದಾಗಿದೆ. ಸರಕಾರ 5 ಗ್ಯಾರೆಂಟಿಗಳನ್ನು ನೀಡಿದೆ. ಮಹಿಳೆಯರಿಗೆ ಸರಕಾರಿ ಬಸ್ ಉಚಿತವಾಗಿದೆ. ಹೀಗಾಗಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಜಾತ್ರೆಗೆ ಆಗಮಿಸುವ ನಿರೀಕ್ಷೆಯಿದೆ. ಆದ್ದರಿಂದ ಸಾರಿಗೆ ಇಲಾಖೆ ಹೆಚ್ಚಿನ ಸಂಖ್ಯೆಯ ಬಸ್ಗಳನ್ನು ಜಾತ್ರೆಗೆ ಒದಗಿಸಬೇಕು ಎಂದರು.
ಜಾತ್ರೆಯ ಸಂದರ್ಭದಲ್ಲಿ ಭಾರೀ ಪ್ರಮಾಣದ ತೆರಿಗೆಯನ್ನು ಪಪಂ ವಸೂಲಿ ಮಾಡುತ್ತಿದೆ. ಗುತ್ತಿಗೆ ಪಡೆದ ಜನರು ಸಣ್ಣ ಪುಟ್ಟ ವರ್ತಕರಿಂದ ದೌರ್ಜನ್ಯದಿಂದ ತೆರಿಗೆ ವಸೂಲಿ ಮಾಡುತ್ತಾರೆ. ಈ ಬಾರಿ ಬರದ ಹಿನ್ನೆಲೆಯಲ್ಲಿ ಪಪಂ ಯಾವುದೇ ತೆರಿಗೆ ವಸೂಲಿ ಮಾಡಬಾರದು ಎಂದು ವೇಣುಗೋಪಾಲ್ ಹಾಗೂ ಪಪಂ ಮಾಜಿ ಕೌನ್ಸಿಲರ್ ಬಸಣ್ಣ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಪಪಂ ಯಾವುದೇ ತೆರಿಗೆ ವಸೂಲಿ ಮಾಡಬಾರದು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಮಾ.26ರಂದು ಜಾತ್ರೆಯಲ್ಲಿ 4ರಿಂದ5 ಲಕ್ಷ ಜನರು ಭಾಗವಹಿಸಲಿದ್ದಾರೆ. ಪ್ರಸಕ್ತ ಸಾಲಿನ ಜಾತ್ರೆಯು ಬರ ಹಾಗೂ ಚುನಾವಣೆ ಹಿನ್ನೆಲೆಯಲ್ಲಿ ಜರುಗುತ್ತಿದೆ. ಹೀಗಾಗಿ ಹೆಚ್ಚಿನ ಎಚ್ಚರ ಮತ್ತು ಕಾಳಜಿ ಅಗತ್ಯವಾಗಿದೆ. ಚುನಾವಣೆಯ ನೀತಿ ಸಂಹಿತೆ ಜಾರಿಯಾದರೆ ಅದಕ್ಕೆ ತಕ್ಕಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಒದಗಿಸಬೇಕು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿಯವರು ದೇವಾಲಯದ ಆಡಳಿತಾಧಿಕಾರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಉಪ ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿ ತಕ್ಷಣ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕು. ಇದಕ್ಕೆ ಅನುಗುಣವಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ದೇವಾಲಯದ ಸಮೀಪದಲ್ಲಿರುವ ಸೇತುವೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಜಾತ್ರೆಯ ವೇಳೆಗೆ ಇದನ್ನು ಸಿದ್ಧಗೊಳಿಸಬೇಕು ಎಂದು ಸೂಚಿಸಿದರು. ಜಾತ್ರೆಯ ನಂತರದ ದಿನದಲ್ಲಿಯೂ ನೀರು, ವಿದ್ಯುತ್ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಶಾಸಕ ಎನ್.ವೈ.ಗೋಪಾಲ ಕೃಷ್ಣ ಮಾತನಾಡಿ, ಜಾತ್ರೆಗೆ ಮೂಲಭೂತ ಸೌಕರ್ಯಗಳು ಅಗತ್ಯವಿದೆ. ಈ ಬಾರಿ ಬಿಸಿಲು ಹೆಚ್ಚಾಗಿರುವುದರಿಂದ ಕುಡಿಯುವ ನೀರಿನ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು. ಪ್ರತಿ ವರ್ಷದಂತೆ ಈ ಬಾರಿಯೂ ಮೂಲ ಸೌಕರ್ಯಗಳನ್ನು ಒದಗಿಸಬೇಕು. ದೇವಾಲಯದ ನಿಧಿಯಿಂದ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಕಾಶಿ ಮಾತನಾಡಿ ಜಾತ್ರೆಯ ಜನರ ಆರೋಗ್ಯ ಉಸ್ತುವಾರಿಗೆ ಹೆಚ್ಚುವರಿ 120 ಸಿಬ್ಬಂದಿ ನಿಯೋಜಿಸಲಾಗುವುದು. 5ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂಉ ಹೇಳಿದರು.
ಸಭೆಯಲ್ಲಿ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ತಹಸೀಲ್ದಾರ್ ರೆಹಾನ್ ಪಾಷಾ, ಪಪಂ ಮುಖ್ಯಾಧಿಕಾರಿ ಪಾಲಯ್ಯ, ವಾರ್ತಾಧಿಕಾರಿ ತುಕಾರಾಂ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ದೇವಾಲಯದ ಇಒ ಹೆಚ್. ಗಂಗಾಧರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ನಾನಾ ಅಧಿಕಾರಿಗಳಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments