ಕೊಪ್ಪಳ ಡಿಸೆಂಬರ್ 13: ಸರ್ಕಾರದ ವಿವಿಧ ತಂತ್ರಾಂಶಗಳಲ್ಲಿ ರೈತರ, ಸಾರ್ವಜನಿಕರ ಮಾಹಿತಿಯನ್ನು ಸೇರ್ಪಡೆಗೊಳಿಸಲು ವಿಳಂಬ ಮಾಡದೆ, ನಿಗದಿತ ಅವಧಿಯಲ್ಲಿ ಮಾಹಿತಿ ಸೇರ್ಪಡೆ ಮಾಡಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರದಂದು ಜಿಲ್ಲಾ ಪಂಚಾಯತ್ನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಂದಾಯ ಇಲಾಖೆಯ ವಿವಿಧ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಪರಿಹಾರ, ಭೂಮಿ, ಫ್ರೂಟ್ಸ್ ಮುಂತಾದ ತಂತ್ರಾಂಶದಲ್ಲಿ ಫಲಾನುಭವಿಗಳ ಡಾಟಾ ಎಂಟ್ರಿಯನ್ನು ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕು. ವಿಳಂಬ ಮಾಡಿದರೆ ಲಾಗಿನ್ ಸಮಸ್ಯೆಯಂತಹ ತಾಂತ್ರಿಕ ತೊಂದರೆಗಳು ಉಂಟಾಗುತ್ತವೆ. ಅದನ್ನು ಬಗೆಹರಿಸಲು ಮತ್ತಷ್ಟು ಸಮಯ ಕಳೆಯುತ್ತದೆ. ಇದರಿಂದ ಯಾವುದೇ ಕೆಲಸ ನಿಗದಿತ ವೇಳೆಗೆ ಸಮಪರ್ಕಕವಾಗಿ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಫಲಾನುಭವಿಗಳ ಮಾಹಿತಿಯನ್ನು ಸೇರ್ಪಡೆಗೊಳಿಸಲು ವಿಳಂಬ ಮಾಡಬೇಡಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸರ್ಕಾರದಿಂದ ಮಾಸಿಕ ಪಿಂಚಣಿ, ವೃದ್ದಾಪ್ಯ ವೇತನದಂತಹ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳಿಗೆ ಅವರ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಲು ತಿಳಿಸಿ. ಫ್ರೂಟ್ಸ್ ಐಡಿಗೂ ಸಹ ಆಧಾರ್ ಜೋಡಣೆ ಮಾಡಬೇಕು. ಇದರಿಂದ ಬೆಳೆವಿಮೆಯಂತಹ ಪರಿಹಾರ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಫಲಾನುಭವಿಗಳು ಗುಳೆ ಹೋಗಿದ್ದಲ್ಲಿ ಅವರನ್ನು ಸಂಪರ್ಕಿಸಿ ಮಾಹಿತಿ ಸೇರ್ಪಡೆಗೊಳಿಸಬೇಕು. ಅನಗತ್ಯ ಕಾರಣಗಳನ್ನು ಹೇಳಿ, ಫಲಾನುಭವಿ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಬೇಡಿ. ಪ್ರತಿ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ನಿಗದಿತ ಗುರಿಯನ್ನು, ನಿಗದಿತ ವೇಳೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಅವರು ತಿಳಿಸಿದರು.
ಫಲಾನುಭವಿಗಳು ಮರಣ ಹೊಂದಿದ ಸಂದರ್ಭದಲ್ಲಿ ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದು ವರದಿ ಮಾಡಬೇಕು. ಗ್ರಾಮಗಳಲ್ಲಿ ರೈತರು ತಮ್ಮ ಮಾಹಿತಿ ನೀಡಲು ವಿವಿಧ ಕಾರಣಗಳಿಂದ ಹಿಂದೇಟು ಹಾಕುತ್ತಾರೆ. ಅಂತಹವರಿಗೆ ಗ್ರಾಮದ ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರ ಸಹಾಯದಿಂದ ಮನವೊಲಿಸಿ, ಸರ್ಕಾರದ ಸೌಲಭ್ಯದ ಬಗ್ಗೆ ಮನವರಿಕೆ ಮಾಡಿ ಅವರಿಂದ ಮಾಹಿತಿ ಸಂಗ್ರಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮೋಜಿಣಿ, ಮ್ಯುಟೇಷನ್, ಬಗರ್ ಹುಕುಂ, ಆಧಾರ್ ಡುಪ್ಲಿಕೇಶನ್, ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ, ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರಡಿಯಲ್ಲಿ ರಚಿಸಲಾಗಿರುವ ಭೂನ್ಯಾಯ ಮಂಡಳಿ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ಸೇರಿದಂತೆ ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments