ಚಿತ್ರದುರ್ಗ : ಅತ್ಯಂತ ಕೆಳಸ್ತರದಲ್ಲಿರುವವರಿಗೆ ದುಡಿಯುವ ವರ್ಗದವರಿಗೆ ಸರ್ಕಾರ ನೀಡಿರುವ ಕಾರ್ಯಕ್ರಮ ಸರಿಯಾಗಿ ಮುಟ್ಟಿದೆ ಹಾಗೂ ಸರ್ಕಾರದ ಕಾರ್ಯಕ್ರಮಗಳು ಮುಟ್ಟದಿರುವ ಕೆಲವು ಕಡೆಗಳಲ್ಲಿ ಅವುಗಳನ್ನು ವಿಲೇವಾರಿ ಮಾಡಲು ಆದೇಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುರುಘಾ ಮಠದ ಆವರಣದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಫಲಾನುಭವಿಗಳ ಸಭೆ ಹಾಗೂ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಳ ಸ್ತರದಲ್ಲಿ ಶಕ್ತಿ ಇಲ್ಲದವರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಇದನ್ನು ನೆರವೇರಿಸುವರು ಎಂದರು.
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ :
ಬಗರ್ ಹುಕುಂ ಸಾಗುವಳಿ ಮಾಡುವವರಿಗೆ ಹಕ್ಕುಪತ್ರ ನೀಡುವ ಸಂಬಂಧ ಸಮಿತಿಯಲ್ಲಿ ಕೆಲಸಗಳಾಗುತ್ತಿದ್ದು, ಫಾರಂ ನಂ 57 ಸಲುವಾಗಿ ಒಂದು ವರ್ಷ ವಿಸ್ತರಣೆ ಯೂ ಆಗಿದೆ. ಅದರಡಿ ವಿಲೇವಾರಿಗೆ ಆದೇಶ ನೀಡಿದ್ದು, ವಿಳಂಬವಾಗಿರುವಲ್ಲಿ ನೇರವಾಗಿ ಎ.ಸಿ ಅವರು ಸಭೆ ಮಾಡಿಸಿ ವಿತರಣೆ ಮಾಡಲು ಆದೇಶ ನೀಡಲಾಗಿದೆ ಎಂದರು.
ರಾಷ್ಟ್ರೀಯ ಯೋಜನೆ :
ಭದ್ರಾ ಮೇಲ್ದಂಡೆ ಯೋಜನೆಯಡಿ ಕೇಂದ್ರ ಸರ್ಕಾರ 5300 ಕೋಟಿ ಒದಗಿಸಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಯೋಜನೆಯೆಂದು ಘೋಷಿಸಲಾಗುವುದು ಎಂದರು.
ಕೆ.ಎಸ್.ಆರ್.ಟಿ. ಸಿ ನೌಕರರಿಗೆ ವೇತನ ಹೆಚ್ಚಳ ಮಾಡುವ ಬಗ್ಗೆ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರೈತರಿಗೆ ಪರಿಹಾರ :
ಅಜ್ಜಂಪುರದ ಬಳಿ ಭದ್ರಾವತಿ ಕಾಮಗಾರಿ ಬಾಕಿ ಉಳಿದಿರುವ ಬಗ್ಗೆ ಮಾತನಾಡಿ ಅಲ್ಲಿ ರೈತರಿಗೆ ಪರಿಹಾರ ನೀಡುವ ಬಗ್ಗೆ ಅಲ್ಲಿಯ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಲಾಗಿದ್ದು, ಹಿಂದೆ ಚಿಕ್ಕಮಗಳೂರು ಭಾಗದಲ್ಲಿಯೂ ಇದೆ ಸಮಸ್ಯೆಯಾಗಿದ್ದು ಸದಾನಂದಗೌಡರು ಮುಖ್ಯ ಮಂತ್ರಿಗಳಿದ್ದಾಗ ಸಭೆ ಕರೆದು ಬಗೆಹರಿಸಿದಂತೆಯೇ ಇದನ್ನು ಬಗೆಹರಿಸಲಾಗುವುದು. ಎಲ್ಲವನ್ನೂ ಕಾನೂನಿನ ಅಡಿಯಲ್ಲಿಯೇ ಕೈಗೊಳ್ಳಲಾಗುವುದು ಎಂದರು.
ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜಿಗೆ ಅನುದಾನ ಒದಗಿಸಿ ಖುದ್ದು ನಾನೇ ಬಂದು ಅಡಿಗಲ್ಲು ಹಾಕುವೆ ಎಂದರು.
0 Comments