ಚನ್ನಪಟ್ಟಣ ಮಾ.6 ಮೈಲನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ರಮ್ಯಾ ಅವರನ್ನು ಅಮಾನತು ಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಮುರಳೀಧರ್ ಆದೇಶ ಹೊರಡಿಸಿದ್ದಾರೆ.ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷರ ಒಮ್ಮತದ ತೀರ್ಮಾನ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 62(ಡಿ) ಅಡಿ ಪ್ರದತ್ತವಾದ ಅಧ್ಯಕ್ಷರು ಹೊಂದಿದ ಅಮಾನತು ಮಾಡುವ ಅಧಿಕಾರವನ್ನು ಬಳಸಿಕೊಂಡು ರಮ್ಯಾ ಅವರನ್ನು ಅಮಾನತು ಮಾಡಲಾಗಿದೆ ಎಂದು ಸುಧಾ ಮುರಳೀಧರ್ ತಿಳಿಸಿದ್ದಾರೆ.ರಮ್ಯಾ ಅವರು ಕಚೇರಿಯ ಕರ್ತವ್ಯಗಳ ಅಪೂರ್ಣ, ಕ್ರಮಬದ್ಧವಾಗಿ ಕೆಲಸನಿರ್ವಹಿಸದೆ ಇರುವುದು ಹಾಗೂ ಕೆಲಸ ನಿರ್ವಹಿಸುವ ವೇಳೆ ಸಾರ್ವಜನಿಕರಿಗೆ ಸ್ಪಂದಿಸದೆ ಇರುವುದು ಹೀಗೆ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಿಡಿಒ ಅವರು ಸ್ಪಷ್ಟನೆ ನೀಡುವಂತೆ ರಮ್ಯಾ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಆದರೆ ರಮ್ಯಾ ಅವರು ಪಿಡಿಒ ನೋಟಿಸ್ನಿಂದ ಸಿಟ್ಟಿಗೆದ್ದು, ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರು.
ಈ ಹಿನ್ನೆಲೆಯಲ್ಲಿ ರಮ್ಯಾ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
0 Comments