ಮೂಲಸ್ಥಾನದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಿ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ್

by | 02/11/23 | ಕರ್ನಾಟಕ


ಬಳ್ಳಾರಿ,ನ.02
ವಿಮ್ಸ್‍ನ ವೈದ್ಯಾಧಿಕಾರಿಗಳು ತಮ್ಮ ಮೂಲಸ್ಥಾನದಲ್ಲಿದ್ದುಕೊಂಡೇ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯದ ವೇಳೆ ಗೈರಾಗಿರುವುದು ಗಮನಕ್ಕೆ ಬಂದರೆ ಕ್ರಮ ಜರುಗಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತ ಭವನದ ಮೊದಲನೇ ಮಹಡಿ ಸಭಾಂಗಣದಲ್ಲಿ ಗುರುವಾರಂದು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಮ್ಸ್ ಹೆಸರಾಂತ ವೈದ್ಯಕೀಯ ಸಂಸ್ಥೆಯಾಗಿದ್ದು, ಬರುವ ರೋಗಿಗಳಿಗೆ ಸಕಾಲದಲ್ಲಿ ಆರೋಗ್ಯ ಒದಗಿಸಬೇಕು. ವೈದ್ಯಾಧಿಕಾರಿಗಳು ಮೂಲಸ್ಥಾನದಲ್ಲಿದ್ದುಕೊಂಡು ಅವರ ಆರೈಕೆಗೆ ವಿಶೇಷ ಕಾಳಜಿ ವಹಿಸಬೇಕು. ಅವರ ಗಣಕೀಕೃತ ಹಾಜರಾತಿ ಮಾಹಿತಿ ನೀಡಬೇಕು. ಚಲನವಲನಗಳ ಬಗ್ಗೆ ನಿಗಾವಹಿಸಬೇಕು ಎಂದು ಸಚಿವರು, ವಿಮ್ಸ್‍ನ ಮುಖ್ಯ ಆಡಳಿತಾಧಿಕಾರಿ ಸಿದ್ಧರಾಮೇಶ್ವರ ಅವರಿಗೆ ಸೂಚಿಸಿದರು.
ವಿಮ್ಸ್‍ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಒಳಚರಂಡಿ ವ್ಯವಸ್ಥೆ ನಿರ್ವಹಣೆಗೆ ಕ್ರಮ ವಹಿಸಬೇಕು. ಸಂಸ್ಥೆಯ ಆವರಣ ಸ್ವಚ್ಛವಾಗಿಟ್ಟುಕೊಳ್ಳಲು ಬೇಜವಾಬ್ದಾರಿ ಸಲ್ಲದು. ನಿರ್ವಹಣೆಗೆ ಕೊರತೆಯಿದ್ದಲ್ಲಿ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ವಿವಿಧ ವಿಭಾಗಗಳಿಗೆ ಬೇಕಾದ ಗುಣಮಟ್ಟದ ಸಲಕರಣೆಗಳ ಅಗತ್ಯವಿದ್ದಲ್ಲಿ ಪ್ರಸ್ತಾವನೆ ನೀಡಬೇಕು. ಅಗತ್ಯ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಶವ ರವಾನೆಗೆ ದುರಸ್ಥಿ ವಾಹನವಲ್ಲದೇ, ಸುಸಜ್ಜಿತ ಅಂಬ್ಯುಲೆನ್ಸ್ ವಾಹನ ಮೀಸಲಿರಿಸಬೇಕು ಎಂದು ತಿಳಿಸಿದರು.
ವಿಮ್ಸ್‍ನಲ್ಲಿ ಬಹಳ ದಿನಗಳಿಂದ ಎಕ್ಸ್-ರೇ ಯಂತ್ರವು ದುರಸ್ಥಿಯಾಗಿದೆ, ಬರುವ ರೋಗಿಗಳು ಹೊರಗಡೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ದುರಸ್ಥಿಗೆ ಕ್ರಮ ವಹಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ನೂತನವಾಗಿ ದಂತ ವೈದ್ಯಕೀಯ ಕಾಲೇಜು ನಿರ್ಮಾಣವಾಗಿದೆ. ಹಲ್ಲಿನ ಸಮಸ್ಯೆಗಳಿಗೆ ಹಲವಾರು ಸೌಲಭ್ಯಗಳಿವೆ. ಈ ಕುರಿತು ಸಾರ್ವಜನಿಕರಿಗೆ ಹೆಚ್ಚು ಪ್ರಚಾರ ನೀಡಬೇಕು, ಅವರು ಸೌಲಭ್ಯ ಪಡೆಯುವಂತರಾಗಬೇಕು ಎಂದರು.
ಮುಖ್ಯವಾಗಿ ವಿಮ್ಸ್ ಆಸ್ಪತ್ರೆಯಲ್ಲಿ ದೊರಕುವ ಸೌಲಭ್ಯಗಳ ಬಗ್ಗೆ ಹಾಗೂ ವಿವಿಧ ವಿಭಾಗಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಸಾರ್ವಜನಿಕರಿಗೆ ಸುಲಭವಾಗಿ ತಿಳಿಯಲು ಸೂಚನಾ ಅಥವಾ ಮಾಹಿತಿ ಫಲಕಗಳನ್ನು ಪ್ರದರ್ಶಿಸಬೇಕು, ಇದರಿಂದ ಹಳ್ಳಿ ಭಾಗದ ಜನರಿಗೆ ಸುಗಮವಾಗುತ್ತದೆ ಎಂದು ಆಡಳಿತ ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಸಾರ್ವಜನಿಕರಿಗೆ ಗುಣಮಟ್ಟ ಚಿಕಿತ್ಸೆ ಒದಗಿಸುವ ಕ್ರಮ ಹಾಗೂ ವಿಭಾಗಗಳ ಕುಂದು-ಕೊರತೆಗಳನ್ನು ಪ್ರಸ್ತಾಪಿಸಲು ಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರನ್ನೊಳಗೊಂಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ನಿರ್ದೇಶಕರಿಗೆ ಸೂಚಿಸಿದರು.
ಬರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಬಾರದು, ಬದಲಾಗಿ ಅದಕ್ಕೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಪಟ್ಟಿಮಾಡಿ ಪ್ರಸ್ತಾವನೆ ನೀಡಬೇಕು ಎಂದರು.
ಸಭೆಯಲ್ಲಿ ವಿಮ್ಸ್‍ನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಧ್ಯಾಪಕರ ಸಭಾಂಗಣ, 300 ವಿದ್ಯಾರ್ಥಿಗಳ ಸಾಮಥ್ರ್ಯವುಳ್ಳ ಪರೀಕ್ಷಾ ಕೊಠಡಿಗಳ ಕಾಮಗಾರಿ, 400 ಆಸನ ಸಾಮಥ್ರ್ಯವುಳ್ಳ ತಾಯಿ-ಮಕ್ಕಳ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಕುರಿತು ಮಾಹಿತಿ ಪಡೆದುಕೊಂಡರಲ್ಲದೇ, ಕಾಮಗಾರಿಗಳಲ್ಲಿ ಗುಣಮಟ್ಟತೆ ಕಾಯ್ದುಕೊಳ್ಳುವಂತೆ ಮತ್ತು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಕೋವಿಡ್ ಸಮಯದಲ್ಲಿ ಒದಗಿಸಲಾದ ಸಾಮಾಗ್ರಿ, ಪರಿಕರಗಳ ಬಗ್ಗೆ ವಿಚಾರಿಸಿದರು ಹಾಗೂ ವಿಮ್ಸ್‍ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಸುತ್ತಿರುವ ಡಿಇಒ, ಗೃಹರಕ್ಷಕ ದಳ ಸಿಬ್ಬಂದಿ, ಪೌರ ಕಾರ್ಮಿಕರ ವೇತನ ಹಾಗೂ ಇಎಸ್‍ಐ-ಪಿಎಫ್ ಸಕಾಲದಲ್ಲಿ ಪಾವತಿಯ ಬಗ್ಗೆ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ವಿಮ್ಸ್‍ನ ಮುಖ್ಯ ಆಡಳಿತಾಧಿಕಾರಿ ಸಿದ್ಧರಾಮೇಶ್ವರ, ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಸೇರಿದಂತೆ ವಿಮ್ಸ್ ಆಡಳಿತಾಧಿಕಾರಿಗಳು, ವಿವಿಧ ವಿಭಾಗದ ಮುಖ್ಯಸ್ಥರು, ಗುತ್ತಿಗೆದಾರರು ಹಾಗೂ ಇತರರು ಉಪಸ್ಥಿತರಿದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *