ಹೊಸದುರ್ಗ: ನೀರು ಹಾಗೂ ವಿದ್ಯುತ್ ಅನ್ನು ರಾಜ್ಯ ಎದುರಿಸುತ್ತಿದೆ. ಆದರೆ ನಮ್ಮ ಜೀವಮಾನದಲ್ಲಿ ಬಹುದೊಡ್ಡ ಬರಗಾಲ ನೋಡಿರಲಿಲ್ಲ ಎಂದು ಪಂಡಿತಾರಾಧ್ಯ ಸ್ವಾಮೀಜಿ ತೀರ್ವ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಜೀವನದ ಮೌಲ್ಯಗಳು ದೂರವಾಗುತ್ತಿವೆ ಎನ್ನುವುದು ಈ ನಾಡಿನ, ದೇಶದ ಅಧಃಪತನ. ರಾಜ್ಯ ಸರ್ಕಾರವು ದೃಢ ನಿರ್ಧಾರ ಕೈಗೊಳ್ಳಬೇಕಿದೆ. ನೀರಿಲ್ಲದಿದರೆ ಬದುಕಲು ಸಾಧ್ಯವಾಗದು. ಕಾಲಕಾಲಕ್ಕೆ ಬರಬೇಕಾದ ಮಳೆ ಬರುತ್ತಿಲ್ಲ ಎಂದು ಬೇಸರಿಸಿದರು.
ನಮ್ಮ ಸ್ವಾರ್ಥಕ್ಕಾಗಿ, ದುರಾಸೆಗಾಗಿ ಗಣಿಗಾರಿಕೆ ಹೆಚ್ಚಿದ್ದು ಮೊದಲ ಅಪರಾಧ. ಎರಡನೆಯದು; ಅರಣ್ಯ ನಾಶ. ಮೂರನೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಿಲ್ಲ. ಇದಕ್ಕೆಲ್ಲ ಕಾರಣ ನಮ್ಮ ಸ್ವಯಂಕೃತ ಅಪರಾಧ ಎಂದು ವಿಷಾದ ವ್ಯಕ್ತಪಡಿಸಿದರು.
ಹಿಂದೆ ಕೆರೆಕಟ್ಟೆಗಳು, ಸಣ್ಣ ಹಳ್ಳಗಳು ತುಂಬಿ ತುಳುಕುತ್ತಿದ್ದವು. ಈಗ ಬಾಟಲಿ ನೀರು ಕುಡಿದರೂ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇವೆ. ಅನುಮಾನ ಪಡದೆ ಎಲ್ಲರ ಪ್ರಗತಿ ಬಯಸುವ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನೀರನ್ನು ಹಿತವಾಗಿ, ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಗಣಪತಿ ಪೂಜೆ ಕುರಿತು ಮಾತನಾಡಿದ್ದಕ್ಕೆ ಶ್ರೀಗಳು ಪ್ರತಿಕ್ರಿಯೆ ನೀಡಿದ್ದು, ನಮ್ಮ ಬಗ್ಗೆ ಪತ್ರಿಕೆಯೊಂದು ಕೆಟ್ಟದಾಗಿ ಬರೆದಿದೆ. ಈ ಪತ್ರಿಕೆ ವಿರುದ್ಧ ಪ್ರತಿಭಟನೆಗಳು ಆಯೋಜಿಸಬೇಕೆಂದು ಭಕ್ತರು ಹೇಳಿದ್ದಾರೆ. ಆದರೆ ನಾವು ನಂಬಿದ್ದು ಬಸವತತ್ವ. ನಮ್ಮ ಹಿರಿಯ ಸ್ವಾಮೀಜಿ ಶ್ರೀ ಶಿವಕುಮಾರ ಅವರ ಆಶೀರ್ವಾದ ಜೊತೆಗೆ ಭಕ್ತರು ಇರುವಾಗ ಪ್ರತಿಭಟನೆ ಬೇಕಿಲ್ಲ ಎಂದು ಪಂಡಿತಾರಾಧ್ಯ ಸ್ವಾಮೀಜಿ ಸ್ಪಷ್ಟಪಡಿಸಿದರು.
ಪರೀಕ್ಷೆಗಳು ಹತ್ತಿರ ಬಂದಾಗ ವಿದ್ಯಾರ್ಥಿಗಳು ಗಣಪತಿ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಓದದೇ ಪಾಸಾಗಲು ಸಾಧ್ಯವೆ? ಡಿಜೆ ಹಾಕಿಕೊಂಡು, ಕುಡಿದು, ಕುಣಿದು ಕುಪ್ಪಳಿಸುವ ಗಣಪತಿ ಉತ್ಸವಗಳು ನಡೆಯುವಾಗ ಸತ್ಯವಾಗಿ ಹೇಳಲೇಬೇಕು, ನಿಷ್ಠುರವಾಗಿ ಮಾತನಾಡಬೇಕು. ಹೀಗೆ ಹೇಳಿದಾಗ ನಮ್ಮ ವ್ಯಕ್ತಿತ್ವ ಏನೆಂಬುದು ನಮಗೆ ಗೊತ್ತಿದೆ. ನಮ್ಮ ಭಕ್ತರಿಗೆ ಗೊತ್ತಿದೆ. ಸಣ್ಣ ಧ್ವನಿಯಲ್ಲಿ ಹೇಳಿದರೆ ಪ್ರಯೋಜನವಿಲ್ಲ ಎಂದು ಹೇಳಿದರು.
0 Comments