ಬೊಬ್ಬೂರು ಪಾರಂ ಡಿ.18:
ಜೇನು ಕೃಷಿಯಿಂದ ಆಹಾರ ಉತ್ಪಾದನೆಯಲ್ಲಿ ಹೆಚ್ಚಳ, ಮಕ್ಕಳ ಹಾಗೂ ವಯಸ್ಕರ ಆರೋಗ್ಯದಲ್ಲಿ ಸುಧಾರಣೆ, ರೈತರ ಹಾಗೂ ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಜನೆ ಹಾಗೂ ಕಡಿಮೆ ಬಂಡಾಳ ಬೇಕಾದ ಪರಿಸರ ಸ್ನೇಹಿ ಉಪಕಸುಬು ಎಂದು ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹೊಳಲ್ಕೆರೆ ತಾಲ್ಲೂಕಿನ ರೈತರಿಗೆ ಜೇನು ಸಾಕಾಣಿಕೆ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೇನು ಸಾಕಾಣಿಕೆಯ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ತಾಂತ್ರಿಕ ಮಾಹಿತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಹೊಳಲ್ಕೆರೆ ತಾಲ್ಲೂಕಿನ ಮಹಡಿ ಜೇನು ಸಾಕಾಣಿಕೆ ತಜ್ಞ ಮಂಜನಾಥ ಮಾತನಾಡಿ, ಜೇನು ಕೃಷಿಯಿಂದ ತಮ್ಮ ಅಡಿಕೆ ತೋಟದಲ್ಲಿ ಇಳುವರಿ ಹೆಚ್ಚಿದ್ದು, ಜೇನು ತುಪ್ಪ ಮಾರಾಟ, ಜೇನಿನ ಮೇಣ, ಜೇನಿನಿಂದ ಸಾಬೂನು ತಯಾರಿಕೆ, ನೋವು ನಿವಾರಕ ಔಷಧಿ, ಹಿಮ್ಮಡಿ ಹಾಗೂ ತುಟಿ ಹೊಡೆಯುವುದಕ್ಕೆ ಮುಲಾಮು ತಯಾರಿಸಿ ಜೇನು ಸಾಕಾಣಿಕೆಯನ್ನು ಒಂದು ಕಿರು ಗೃಹ ಉದ್ದಿಮೆಯಾಗಿ ನಡೆಸಲು ಸಹಕಾರಿಯಾಗಿದೆ ಎಂದು ತಮ್ಮ ಯಶೋಗಾಥೆಯನ್ನು ತಿಳಿಸುತ್ತಾ, ರೈತರಿಗೆ ಜೇನು ಸಾಕಾಣಿಕೆಗೆ ಹೆಚ್ಚಿನ ಆಸಕ್ತಿ ಮತ್ತು ಉತ್ಸಾಹ ಮೂಡಿಸಿದರು.
ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಜೇನು ತಜ್ಞ ಶಾಂತವೀರಯ್ಯ ಮಾತನಾಡಿ, ಹೊಳಲ್ಕೆರೆಯಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾಗಿದ್ದ ಅಡಿಕೆಯಲ್ಲಿ ಉತ್ತಮ ಇಳುವರಿ ಪಡೆಯಲು ಪ್ರತಿ ಎಕರೆಗೆ 4-5 ಜೇನು ಪೆಟ್ಟಿಗೆಗಳನ್ನು ಇಡುವುದು ಸೂಕ್ತ. ಪ್ರತಿಯೊಬ್ಬ ರೈತರು ಸಹ ಕನಿಷ್ಟ 2 ಜೇನು ಪೆಟ್ಟಿಗೆಯೊಂದಿಗೆ ಜೇನು ಸಾಕಾಣಿಗೆ ಮುಂದಾಗಬೇಕು. ಜೇನು ಸಾಕಾಣಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ತಾಂತ್ರಿಕ ಮಾಹಿತಿಗೆ ದೂರವಾಣಿ ಸಂಖ್ಯೆ 9449726068 ಗೆ ಕರೆ ಮಾಡುವ ಮೂಲಕ ಸಂಪರ್ಕಿಸಬಹುದು ಎಂದರು.
ತರಬೇತಿಯ ನಂತರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬಬ್ಬೂರು ಫಾರಂನ ಮಾವಿನ ತೋಪಿನಲ್ಲಿ ಇದ್ದ ಜೇನು ಪೆಟ್ಟಿಗೆ ಘಟಕಕ್ಕೆ ಭೇಟಿ ನೀಡಿ ರೈತರಿಗೆ ಜೇನು ಪೆಟ್ಟಿಗೆಯ ನಿರ್ವಹಣೆಯ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಎಂ.ಉಷಾರಾಣಿ (ರೈತ ಮಹಿಳೆ), ಕೃಷಿ ಅಧಿಕಾರಿಗಳಾದ ರಂಜಿತಾ ಮತ್ತು ಪವಿತ್ರ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿ ಮತ್ತು ರೈತರು ಹಾಜರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments