ಚಳ್ಳಕೆರೆ: ಕನ್ನಡ ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಶಾಲಾ-ಕಾಲೇಜುಗಳಲ್ಲದೆ ಪೋಷಕರಿಗೂ ಜವಾಬ್ದಾರಿ ಇರಬೇಕು ಕೇವಲ ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ಮನೋಭಾವದಿಂದ ಹೊರ ಬಂದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಸಾಮಾಜಿಕ ಹೋರಾಟಗಾರ ಹೆಚ್ ಎಸ್ ಸೈಯದ್ ಅಭಿಪ್ರಾಯಪಟ್ಟರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿತವಾಗಿರುವ ಖಾಸಗಿ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಳಸುತ್ತಿರುವ ವಾಹನಗಳ ಮೇಲೆ ತಮ್ಮ ವಿದ್ಯಾ ಸಂಸ್ಥೆ ಹೆಸರುಗಳನ್ನು ಆಂಗ್ಲ ಭಾಷೆಯಲ್ಲಿ ಬರೆಸಿರುವುದನ್ನು ಖಂಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಕನ್ನಡ ಭಾಷೆ ಅಭಿಮಾನ ಬೆಳೆಯಲು ಮೊದಲು ತಮ್ಮ ಮನೆಗಳಲ್ಲಿ ಕನ್ನಡ ಮಾತನಾಡುವ ಮೂಲಕ ಭಾಷಾಭಿಮಾನವನ್ನು ಬೆಳೆಸಬೇಕು ಇತ್ತೀಚಿನ ದಿನಗಳಲ್ಲಿ ದಿನಗೂಲಿ ಮಾಡುವ ನೌಕರರು ಸಹ ತಮ್ಮ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಕೊಡಿಸಲು ಮುಂದಾಗುತ್ತಿದ್ದಾರೆ ಇದು ತಪ್ಪಲ್ಲ ಆದರೆ ತಮ್ಮ ಸ್ವಂತ ಕನ್ನಡ ಭಾಷೆಯನ್ನು ಮರೆತು ಬೇರೊಂದು ಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ನೋವಿನ ಸಂಗತಿಯಾಗಿದೆ.
ಕನ್ನಡಪರ ಸಂಘಟನೆಗಳು ಕೇವಲ ನವೆಂಬರ್ ತಿಂಗಳಿಗೆ ತಮ್ಮ ಕನ್ನಡ ಪರ ಹೋರಾಟಗಳನ್ನು ಸೀಮಿತಗೊಳಿಸದೆ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಭಾಷೆಯ ಬಗ್ಗೆ ಅರಿವನ್ನು ಮೂಡಿಸುವ ಜವಾಬ್ದಾರಿ ಹೊರಬೇಕು ಎಂದರು.
ಕನ್ನಡ ರಕ್ಷಣಾ ಮತ್ತು ಸಂಸ್ಕೃತಿಕ ವೇದಿಕೆ ಸದಸ್ಯ ಹಾಗೂ ಸಾಹಿತಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ ಮೈಸೂರು ರಾಜ್ಯವಾಗಿದ್ದ ಕರ್ನಾಟಕಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ವಾಗಿದ್ದರು ಸಹ ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಹಿಂದೆ ಬೀಳುತ್ತಿದ್ದೇವೆ ಸಮಾಜಕ್ಕೆ ಶಿಕ್ಷಣ ವ್ಯವಸ್ಥೆ ಕಡ್ಡಾಯವಾಗಿ ಬೇಕಿದೆ ಶಿಕ್ಷಣ ವ್ಯವಸ್ಥೆಯಿಂದ ಸದೃಢ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಆದರೆ ಕರ್ನಾಟಕದಲ್ಲಿ ಖಾಸಗಿ ಶಾಲಾ ಕಾಲೇಜುಗಳು ಕನ್ನಡವನ್ನು ಹೀನಾಯವಾಗಿ ಕಾಣುತ್ತಿದ್ದಾರೆ ಶಾಲೆಗಳಲ್ಲಿ ಕೇವಲ ಆಂಗ್ಲ ಭಾಷೆಯಲ್ಲಿ ಮಾತನಾಡಬೇಕು ಎಂಬ ಷರತ್ತು ವಿಧಿಸುವುದಲ್ಲದೆ ಮಕ್ಕಳನ್ನು ಶಾಲೆಗಳಿಗೆ ಕರೆ ತರುವ ವಾಹನಗಳ ಮೇಲೆ ಆಂಗ್ಲ ಭಾಷೆಯಲ್ಲಿ ತಮ್ಮ ಶಾಲೆಗಳ ಹೆಸರುಗಳನ್ನು ಬರೆಸುತ್ತಿರುವುದು ಅತ್ಯಂತ ಖಂಡನೀಯ ವಿಷಯವಾಗಿದೆ ಬರುವ ನವೆಂಬರ್ 10ರ ಒಳಗೆ ಎಲ್ಲಾ ಖಾಸಗಿ ಹಾಗೂ ಅನುದಾನಿತ ಶಾಲಾ ಆಡಳಿತ ಮಂಡಳಿ ತಮ್ಮ ವಾಹನಗಳ ಮೇಲೆ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಶಾಲೆಗಳ ಹೆಸರುಗಳನ್ನು ಬರಸಬೇಕು ಇಲ್ಲದಿದ್ದಲ್ಲಿ ವಾಹನಗಳಿಗೆ ಕಪ್ಪು ಮಸಿ ಬಳಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಮಾತನಾಡಿ ಸರ್ಕಾರ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ರೂಪಿಸಿದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಂಬಂಧ ಪಟ್ಟ ಶಾಲೆಗಳೊಂದಿಗೆ ತುರ್ತು ಸಭೆ ನಡೆಸಿ ಮನವರಿಕೆ ಮಾಡಿ ಕೊಟ್ಟು ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯರಾದ ಹೆಚ್ ನಾಗೇಂದ್ರಪ್ಪ ಜಿಎನ್ ವೀರಣ್ಣ ರೆಡ್ಡಿ ತಿಪ್ಪೇಶ್ ರಮೇಶ್ ನಾಗರಾಜ್ ಹೆಚ್ ಮಹಾಂತೇಶ್ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments